ಮಂಗಳೂರು, ಡಿ. 23 : : ಎಂ.ಆರ್.ಜಿ. ಗ್ರೂಪ್ ನ ಆಶಾ-ಪುಕಾಶ್ ಶೆಟ್ಟಿ ಅವರ ಸಹಾಯ ಪ್ರದಾನ ಸಮಾರಂಭ ‘ನೆರವು-2025’ ಡಿ. 25ರಂದು ಕೂಳೂರಿನಲ್ಲಿರುವ ಗೋಲ್ಡ್ ಫಿಂಚ್ ಮೈದಾನದಲ್ಲಿ ನಡೆಯಲಿದೆ. 7ನೇ ವರ್ಷದ ಈ ಸಮಾರಂಭದಲ್ಲಿ ಸುಮಾರು 4 ಸಾವಿರ ಕುಟುಂಬಗಳು ಹಾಗೂ 100ಕ್ಕೂ ಅಧಿಕ ಸಂಘ-ಸಂಸ್ಥೆಗಳಿಗೆ ಒಟ್ಟು 9.5 ಕೋಟಿ ಮೊತ್ತದ ನೆರವು ವಿತರಿಸಲಾಗುವುದು ಎಂದು ಯೋಜನೆಯ ಪವರ್ತಕರಾದ ಎಂ.ಆರ್.ಜಿ. ಗ್ರೂಪ್ನ ಚೇರ್ಮನ್ ಡಾ. ಪುಕಾಶ್ ಶೆಟ್ಟಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ನಗರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನೆರವು’ ಯೋಜನೆ ಈ ವರ್ಷ ಏಳನೇ ವರ್ಷವನ್ನು ಪೂರೈಸುತ್ತಿದೆ. ಯೋಜನೆ ಇನ್ನೂ ಮೂರು ವರ್ಷಗಳ ಕಾಲ ಮುಂದುವರಿಯಲಿದ್ದು, ದಶಮಾನೋತ್ಸವದ ಬಳಿಕ ಫಲಾನುಭವಿಗಳನ್ನು ಒಗ್ಗೂಡಿಸಿ ಯೋಜನೆಗೆ ಸಾಮೂಹಿಕ ಸ್ವರೂಪ ನೀಡುವ ಚಿಂತನೆ ಇದೆ. ಈ ವಿಸ್ತರಣೆಯಿಂದ ಮುಂದಿನ ದಿನಗಳಲ್ಲಿ ಪ್ರತಿವರ್ಷ ಕನಿಷ್ಠ 14 ಸಾವಿರ ಕುಟುಂಬಗಳಿಗೆ ನೆರವು ನೀಡುವ ಸಾಧ್ಯತೆ ಉಂಟಾಗಲಿದೆ ಎಂದರು.
ಆಧುನಿಕ ತಂತ್ರಜ್ಞಾನ ಯುಗದಲ್ಲಿಯೂ ವೈದ್ಯಕೀಯ ಚಿಕಿತ್ಸೆ ಎಲ್ಲರಿಗೂ ಸುಲಭವಾಗಿ ಲಭ್ಯವಾಗುತ್ತಿಲ್ಲ ಅದ್ದರಿಂದ ಈ ವರ್ಷ ನೆರವಿನ ಮೊತ್ತದ ದೊಡ್ಡ ಭಾಗವನ್ನು ಆರೋಗ್ಯ ಕ್ಷೇತ್ರಕ್ಕೆ ಮೀಸಲಾಗಿದೆ ಎಂದು ಅವರು ಹೇಳಿದರು.
ಜಾತಿ, ಧರ್ಮ, ಪಂಗಡದಂತಹ ಯಾವುದೇ ಮಾನವ ನಿರ್ಮಿತ ಗಡಿಗಳಿಲ್ಲದೆ ಅವಶ್ಯಕತೆಯೇ ಫಲಾನುಭವಿಗಳ ಆಯ್ಕೆಯ ಏಕೈಕ ಮಾನದಂಡವಾಗಿದೆ.ಅರ್ಜಿಗಳನ್ನು ಸ್ವಾಯತ್ತ ಸಮಿತಿ ಪರಿಶೀಲಿಸಿ ಫಲಾನುಭವಿಗಳನ್ನು ಆಯ್ಕೆ ಮಾಡಿದೆ.ದಿವ್ಯಾಂಗರು, ಡಯಾಲಿಸಿಸ್ ಸೇರಿದಂತೆ ನಿರಂತರ ಚಿಕಿತ್ಸೆ ಅಗತ್ಯವಿರುವವರು, ಶಿಕ್ಷಣ ನೆರವು ಬೇಕಾದ ವಿದ್ಯಾರ್ಥಿಗಳು, ಸಿಂಗಲ್ ಪೇರೆಂಟ್ ಮಕ್ಕಳು, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು ನೆರವಿನ ಲಾಭ ಪಡೆಯಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ಮೂಡಬಿದ್ರೆಯ ಅಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ್ ಆಳ್ವ, ಚಲನಚಿತ್ರ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಎಂ.ಆರ್.ಜಿ. ಗ್ರೂಪ್ನ ಆಡಳಿತ ನಿರ್ದೇಶಕ ಗೌರವ್ ಪಿ. ಶೆಟ್ಟಿ ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.











