ಗುರುಪುರ, ಏ. 05 : 3ನೇ ವರ್ಷದ ಮೂಳೂರು–ಅಡ್ಡೂರು ಜೋಡುಕೆರೆ ಗುರುಪುರ ಕಂಬಳವು ಎ.4, ಶನಿವಾರದಂದು ಮಾಣಿಬೆಟ್ಟು ಗುತ್ತಿನಲ್ಲಿ ಕಂಬಳ ಸಮಿತಿ ಅಧ್ಯಕ್ಷ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ನೇತೃತ್ವದಲ್ಲಿ ಆರಂಭಗೊಂಡಿತು.
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕರಾದ ಅನಂತ ಪದ್ಮನಾಭ ಆಸ್ರಣ್ಣ ಕಂಬಳವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕಂಬಳದಲ್ಲಿ ಎಮ್ಮೆಗಳು ಹೇಗೆ ಮುಖ್ಯವೋ, ಹಾಗೆಯೇ ಪ್ರೇಕ್ಷಕರೂ ಅಷ್ಟೇ ಮುಖ್ಯ. ಹಾಗಾಗಿ ಎಲ್ಲರೂ ಒಂದುಗೂಡಿ ತುಳುನಾಡಿನ ಅಸ್ಮಿತೆಯಾಗಿರುವ ಕಂಬಳವನ್ನು ಪ್ರೋತ್ಸಾಹಿಸಬೇಕು ಎಂದರು.
ಉದ್ಘಾಟನಾ ಸಮಾರಂಭದಲ್ಲಿ, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ರೈ ಮಾಲಾಡಿ ದೀಪ ಬೆಳಗಿಸಿ ಮಾತನಾಡಿದ ಅವರು, ಇನಾಯತ್ ಅಲಿ ಅವರ ನೇತೃತ್ವದಲ್ಲಿ, ಮೂರನೇ ವರ್ಷದ ಕಂಬಳ ಇತರ ಕಂಬಳಗಳಿಗೆ ಹೋಲಿಸಿದರೆ ವಿಶೇಷ ರೀತಿಯಲ್ಲಿ ನಡೆಸಲಾಗುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇನಾಯತ್ ಅಲಿ ವಹಿಸಿದ್ದರು. ಈ ಸಂದರ್ಭದಲ್ಲಿ ವಿವಾಹ ಬೆಂಬಲ ಮತ್ತು ನಿರ್ಗತಿಕ ಕುಟುಂಬಗಳಿಗೆ ವಸತಿ ಸೇರಿದಂತೆ ಸಾಮಾಜಿಕ ಉದ್ದೇಶಗಳಿಗಾಗಿ ಒಟ್ಟು 25 ಲಕ್ಷ ರೂ.ಗಳ ಆರ್ಥಿಕ ಸಹಾಯವನ್ನು ವಿತರಿಸಲಾಯಿತು.
ಈ ಸಂದರ್ಭ ದಲ್ಲಿ ಮೂಳೂರು ಮುಂಡಿತ್ತಾಯ ದೈವಸ್ಥಾನದ ತಂತ್ರಿಗಳಾದ ಜಿ.ಟಿ. ವಾಸುದೇವ ಭಟ್, ಜಿಲ್ಲಾ ಕಂಬಳ ಸಮಿತಿಯ ಕಾರ್ಯಾಧ್ಯಕ್ಷ ಗುಣಪಾಲ ಕಡಂಬ, ಮಾಣೂರು ಸುಬ್ರಾಯ ದೇವಸ್ಥಾನದ ಅಧ್ಯಕ್ಷ ಶಶಿಧರ್ ಭಟ್ ಬೊಳ್ಳಾರುಗುತ್ತು, ಕೊಡೆತ್ತೂರು ಗುತ್ತಿನ ಗುತ್ತಿನಾ ನಿತಿನ್ ಶೆಟ್ಟಿ, ಪದ್ಮರಾಜ್ ಆರ್. ಪೂಜಾರಿ, ಗುರುಪುರ ವೆಂಕಟರಮಣ ದೇವಳದ ಆಡಳಿತ ಮೊಕೇಸರರಾದ ಪಾಂಡುರಂಗ ಕಾಮತ್, ಅದ್ಯಪಾಡಿ ದೈವಲಂಗಲಗುಡ್ಡೆ ನೀಲಕಂಠ ಉಮಾಮಹೇಶ್ವರಿ ದೇವಸ್ಥಾನದ ಆಡಳಿತ ಮೊಕ್ತಸರರಾದ ಮಂಜುನಾಥ ಭಂಡಾರಿ, ದೋಣಿಂಜೆ ಗುತ್ತು ಗಡಿಪ್ರಧಾನರಾದ ಪ್ರಮೋದ್ ಕುಮಾರ್ ರೈ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ಪುರುಷೋತ್ತಮ ಚಿತ್ರಾಪುರ, ಎಂ.ಜೆ. ಹೆಗಡೆ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ ಗಬಲಡ್ಕ ಶಿವರಾಮ ಮಲ್ಲಿ ಶಾಲೆಟ್ ಪಿಂಟೊ, ಕಂಬಳ ಸಮಿತಿಯ ಗೌರವಾಧ್ಯಕ್ಷ ಪದ್ಮನಾಭ ಕೋಟ್ಯಾನ್, ಕಾರ್ಯಾಧ್ಯಕ್ಷ ಜಗದೀಶ ಶೆಟ್ಟಿ ಮಾಣಿಬೆಟ್ಟುಗುತ್ತು, ಪ್ರಧಾನ ಕಾರ್ಯದರ್ಶಿ ಯಶವಂತ ಕುಮಾರ್ ಶೆಟ್ಟಿ ಬೆಳ್ಳೂರುಗುತ್ತು ಮೊದಲಾದವರು ಉಪಸ್ಥಿತರಿದ್ದರು.
ಕಂಬಳ ಸಮಿತಿ ಸಂಸ್ಥಾಪಕ ಅಧ್ಯಕ್ಷ ರಾಜ್ ಕುಮಾರ್ ಶೆಟ್ಟಿ ತಿರುವೈಲುಗುತ್ತು ಸ್ವಾಗತಿಸಿದರು. ವಿಜೇತ್ ಶೆಟ್ಟಿ ಮಂಜನಾಡಿ ಮತ್ತು ಮನೋಜ್ ವಾಮಂಜೂರು ಕಾರ್ಯಕ್ರಮ ನಿರೂಪಿಸಿದರು.












