ಮಂಗಳೂರು, ಏ. 24 : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ಇದರ 11 ನೇ ವರ್ಷದ ಪಟ್ಲ ಸಂಭ್ರಮ 2026 ಕಾರ್ಯಕ್ರಮ ಮೇ 30 ಶನಿವಾರ ಅಡ್ಯಾರ್ ಬಳಿಯ ಅಡ್ಯಾರ್ ಗಾರ್ಡನ್ ನಲ್ಲಿ ನಡೆಯಲಿದೆ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿಅವರು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಯಕ್ಷಧ್ರುವ ಪಟ್ಲ ಸಂಭ್ರಮ 2026 ಕಾರ್ಯಕ್ರಮವನ್ನು ಪಾವಂಜೆ ನಾಗವೃಜ ಕ್ಷೇತ್ರದ ಧರ್ಮಧರ್ಶಿಗಳಾದ ಡಾ ಯಾಜಿ ನಿರಂಜನ ಭಟ್ ಉದ್ಘಾಟಿಸಲಿದ್ದಾರೆ. ಅಂದು ಬೆಳಿಗ್ಗೆ 8.30 ರಿಂದ 9 ರ ತನಕ ಚೌಕಿ ಪೂಜೆ ಮತ್ತು ಅಬ್ಬರ ತಾಳ, 9 ರಿಂದ 11 ರ ವರೆಗೆ ಭರತ ನಾಟ್ಯ ಪ್ರದರ್ಶನ, 11 ರಿಂದ 1.30 ರ ವರೆಗೆ ಸಭಾ ಕಾರ್ಯಕ್ರಮ, ಮಧ್ಯಾಹ್ನ 1.30 ರಿಂದ 2 ರ ವರೆಗೆ ನಾಗವೃಜ ಕ್ಷೇತ್ರ ಪಾವಂಜೆಯ ಶ್ರೀ ವಾಣಿ ಶಾಲಾ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ, ಮಧ್ಯಾಹ್ನ 2ರಿಂದ 3.30 ರ ವರೆಗೆ ಮಹಿಳಾ ಯಕ್ಷಗಾನ, ಸಂಜೆ 3.30 ರಿಂದ 5 ರವರೆಗೆ ಯಕ್ಷಗಾನ ಹಾಸ್ಯ ವೈಭವ ನಡೆಯಲಿದೆ ಎಂದರು.
ಪಟ್ಲ ಫೌಂಡೇಶನ್ ಟ್ರಸ್ಟ್ ನ ಪ್ರಧಾನ ಸಂಚಾಲಕರಾದ, ಉದ್ಯಮಿ ಶಶಿಧರ ಬಿ ಶೆಟ್ಟಿ ಬರೋಡಾ ಅವರ ಮಾರ್ಗದರ್ಶನದಲ್ಲಿ ನಡೆಯಲಿರುವ 11 ನೇ ವರ್ಷದ ಪಟ್ಲ ಸಂಭ್ರಮದಲ್ಲಿ ಡಾ ಎಂ ಮೋಹನ್ ಆಳ್ವ ಅವರಿಗೆ 2026 ರ ಯಕ್ಷಧ್ರುವ ಮಹಾಪೋಷಕ ಪ್ರಶಸ್ತಿ ನೀಡಿ ಗೌರವಿಸಲಾಗುವುದು. 2026 ರ ಸಾಲಿನ ಪಟ್ಲ ಪ್ರಶಸ್ತಿಯನ್ನು ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ ಅವರಿಗೆ ನೀಡಲಾಗುವುದು ಎಂದು ತಿಳಿಸಿದರು.
ಬೆಳಿಗ್ಗೆ 11 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದರು, ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.
ಮುಂಬೈ ಹೇರಂಭ ಇಂಡಸ್ಟ್ರೀಸ್ ಸಂಸ್ಥೆಯ ಅಧ್ಯಕ್ಷರಾದ ಡಾ. ಸದಾಶಿವ ಶೆಟ್ಟಿ ಕನ್ಯಾನ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಎಂಆರ್ ಜಿ ಗ್ರೂಪ್ ಕಂಪನೀಸ್ ಬೆಂಗಳೂರು ಇದರ ಅಧ್ಯಕ್ಷರು ಹಾಗೂ ನಿರ್ದೇಶಕರಾದ ಡಾ ಕೆ ಪ್ರಕಾಶ್ ಶೆಟ್ಟಿ ಸಮಾರಭವನ್ನು ದೀಪ ಬೆಳಗಿಸಿ ಉದ್ಘಾಟಿಸಲಿದ್ದಾರೆ. ಗೌರವಾನ್ವಿತರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ 11 ವರ್ಷಗಳಲ್ಲಿ 16 ಕೋಟಿ ಮೌಲ್ಯದ ಸೇವಾ ಕಾರ್ಯಗಳನ್ನು ನೆರವೇರಿಸಿದೆ. ಖ್ಯಾತ 8 ಕಲಾವಿದರಿಗೆ ತಲಾ 1 ಲಕ್ಷ ರೂ. ನಗದು, ಬೆಳ್ಳಿ ಪದಕ ಹಾಗೂ ಸನ್ಮಾನ ಫಲಕ ನೀಡಿ ವಿಶೇಷವಾಗಿ ಗೌರವಿಸಲಾಗಿದೆ. 56 ಮನೆಗಳನ್ನು ನಿರ್ಮಿಸಿ ಕಲಾವಿದರಿಗೆ ಹಸ್ತಾಂತರಿಸಲಾಗಿದ್ದು, 60 ಮನೆಗಳು ಅಂತಿಮ ಹಂತದ ನಿರ್ಮಾಣದಲ್ಲಿವೆ.
210 ಕಲಾವಿದರಿಗೆ ತಲಾ 25,000 ಸಾವಿರ ರೂಪಾಯಿ ಮನೆ ದುರಸ್ತಿ ಸಹಾಯಧನ ವಿತರಿಸಲಾಗಿದೆ.ತೀರಾ ಅಶಕ್ತರಾದ 175 ಕಲಾವಿದರಿಗೆ ತಲಾ 50,000 ಸಾವಿರ ರೂಪಾಯಿ ನೀಡಲಾಗಿದೆ.ವಿವಿಧ ಪ್ರಾದೇಶಿಕ ಘಟಕಗಳ ಮೂಲಕ 530 ಕಲಾವಿದರನ್ನು ಸನ್ಮಾನಿಸಿ ಗೌರವ ಧನ ನೀಡಲಾಗಿದೆ.ಪ್ರತಿವರ್ಷ ಸುಮಾರು 2,450 ಕಲಾವಿದರಿಗೆ 60,000 ಸಾವಿರ ವರೆಗೆ ಚಿಕಿತ್ಸಾ ವೆಚ್ಚ ಹಾಗೂ ಆಕಸ್ಮಿಕ ಮರಣದ ಸಂದರ್ಭದಲ್ಲಿ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಆರತಿ ರಾಮಚಂದ್ರ ಆಳ್ವ, ಸೀತಾರಾಮ್ ರೈ ಸವಣೂರು, ಸಿಎ ಉದಯ ಕುಮಾರ್ ಶೆಟ್ಟಿ, ಪುಭಾಕರ ಜೋಷಿ, ಜಗನ್ನಾಥ ಶೆಟ್ಟಿ ಬಾಳ, ಭುಜಬಲಿ ಧರ್ಮಸ್ಥಳ, ಪುದೀಪ್ ಆಳ್ವ ಕದ್ರಿ ಮತ್ತಿತರರು ಉಪಸ್ಥಿತರಿದ್ದರು.











