ಮಂಗಳೂರು,ಮೇ.23 : ಮಾಜಿ ಸಚಿವ ಹಾಗೂ ವಿಕಾಸ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷ ಕೃಷ್ಣ ಜೆ. ಪಾಲೆಮಾರ್ ಅವರ ನೇತೃತ್ವದಲ್ಲಿ ನಿರ್ಮಾಣಗೊಂಡಿರುವ ನಾಲ್ಕು ಅತ್ಯಾಧುನಿಕ ಸಭಾಭವನಗಳ ಕಾರ್ಯಕ್ರಮ ನಗರದ ಮೇರಿಹಿಲ್ನಲ್ಲಿರುವ ‘ಪಾಲೆಮಾರ್ ಕನೈನನ್ ಸೆಂಟರ್’ನಲ್ಲಿ ಶನಿವಾರ ಅದ್ದೂರಿಯಾಗಿ ನಡೆಯಿತು.
ಮೇರಿಹಿಲ್ನ ಪಾಲೆಮಾರ್ ಕನೈನ್ಯನ್ ಸೆಂಟರ್, ಮೊರ್ಗನ್ಸ್ ಗೇಟ್ನ ಪಾಲೆಮಾರ್ ಗಾರ್ಡನ್, ಸುರತ್ಕಲ್ನ ಪಾಲೆಮಾರ್ ಫಾರ್ಮ್ಸ್ ಹಾಗೂ ಜೆಪ್ಪಿನಮೊಗರುವಿನ ನೇತ್ರಾವತಿ ಸಭಾಂಗಣಗಳನ್ನು ಆಂಧ್ರಪ್ರದೇಶದ ರಾಜ್ಯಪಾಲ ಜ| ಎಸ್. ಅಬ್ದುಲ್ ನಜೀರ್ ಅವರು ಏಕಕಾಲದಲ್ಲಿ ಉದ್ಘಾಟಿಸಿದರು.
ಉದ್ಘಾಟನೆಯನ್ನು ನೆರವೇರಿಸಿದ ಆಂಧ್ರ ಪ್ರದೇಶದ ರಾಜ್ಯಪಾಲ ನ್ಯಾಯಮೂರ್ತಿ ಎಸ್. ಅಬ್ದುಲ್ ನಝೀರ್ ಅವರು ಮಾತನಾಡಿ, ಮಾಜಿ ಸಚಿವರಾದ ಕೃಷ್ಣ ಜೆ. ಪಾಲೆಮಾರ್ ಅವರು ಶೈಕ್ಷಣಿಕ ಕ್ಷೇತ್ರದಲ್ಲಿ ಮಾಡುತ್ತಿರುವ ಸೇವೆಯನ್ನು ಶ್ಲಾಘಿಸಿದರು. ಅವರು ಉದ್ಯಮದ ಜತೆಗೆ ಶಿಕ್ಷಣ ಮತ್ತು ಇತರ ಸಾಮಾಜಿಕ ಚಟುವಟಿಕೆಗಳಿಗೆ ನಿರಂತರ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಹೇಳಿದರು.
ಶಿಕ್ಷಣದಿಂದ ಸಮಾಜದ ಬೆಳವಣಿಗೆ ಆಗುತ್ತದೆ. ಶಿಕ್ಷಣ ಪಡೆದವರು ಸ್ವಾವಲಂಬಿಗಳಾಗುತ್ತಾರೆ.ನಾಲ್ಕು ಸಭಾಂಗಣಗಳನ್ನು ಸಮಾಜಕ್ಕೆ ಅರ್ಪಿಸಿದ ಅವರನ್ನು ಅಭಿನಂದಿಸುತ್ತೇನೆ. ಈ ನೂತನ ಸಭಾಂಗಣಗಳು ಕೇವಲ ಮಂಗಳ ಕಾರ್ಯಕ್ರಮಗಳಿಗಷ್ಟೇ ಸೀಮಿತವಾಗದೆ, ಸಮುದಾಯದ ಶಿಕ್ಷಣ, ಸಂಸ್ಕೃತಿ, ಯುವಜನರ ಕೌಶಲ್ಯಾಭಿವೃದ್ಧಿ ಹಾಗೂ ಸಾಮಾಜಿಕ ಸೌಹಾರ್ದತೆಯ ಚಟುವಟಿಕೆಗಳ ಕೇಂದ್ರಗಳಾಗಿ ಬಳಕೆಯಾಗಲಿ ಎಂದು ಆಶಿಸಿದರು.
ಸಚಿವ ವಿ. ಸೋಮಣ್ಣ ಅವರು ಮಾತನಾಡಿ ಕೃಷ್ಣ ಜೆ. ಪಾಲೆಮಾರ್ ಅವರು ತಮ್ಮ ಕರ್ತವ್ಯ ನಿಷ್ಠೆಯ ವ್ಯಕ್ತಿತ್ವದಿಂದ ಶಕ್ತಿಯಾಗಿ ಬೆಳೆದಿದ್ದಾರೆ.ಗಳಿಕೆಯ ಒಂದಂಶವನ್ನು ಸಮಾಜ ಸೇವೆಗೆ ವಿನಿಯೋಗಿಸುವ ಪಾಲೆಮಾರ್ ಅವರ ಈ ಕಾರ್ಯ ಪ್ರಶಂಷನೀಯ ಎಂದರು.
ಇದೇ ಸಂದರ್ಭದಲ್ಲಿ ಕರಾವಳಿ ಜನತೆಗೆ ಮಹತ್ವದ ಸುದ್ದಿಯೊಂದನ್ನು ನೀಡಿದ ಸಚಿವರು, ಮುಂದಿನ ಒಂದು ತಿಂಗಳೊಳಗೆ ಬೆಂಗಳೂರು-ಮಂಗಳೂರು ನಡುವೆ ಬಹುನಿರೀಕ್ಷಿತ ‘ವಂದೇ ಭಾರತ್’ ರೈಲು ಸಂಚಾರ ಆರಂಭವಾಗಲಿದೆ ಎಂದು ಪ್ರಕಟಿಸಿದರು.
ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಮಾತನಾಡಿ, ‘ಪಾಲೆಮಾರ್ ಕನೈನನ್ ಸೆಂಟರ್ ಕರಾವಳಿಯ ಸೌಂದರ್ಯಕ್ಕೆ ಕಿರೀಟ ಪ್ರಾಯವಾಗಿದೆ. ಎಲ್ಲರನ್ನೂ ಗೌರವದಿಂದ ಕಾಣುವ ಸ್ನೇಹಪರ ವ್ಯಕ್ತಿತ್ವದ ಪಾಲೆಮಾರ್ ಅವರು ಉತ್ತಮ ಭಾರತೀಯನಿಗೆ ಪ್ರಕಟ ರೂಪವಾಗಿದ್ದಾರೆ. ಅವರ ಶ್ರಮದಾಯಕ ಜೀವನದ ಹಾದಿ ಇತರರಿಗೆ ಮಾದರಿಯಾಗಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೃಷ್ಣ ಜೆ. ಪಾಲೆಮಾರ್ ಅವರು ಮಾತನಾಡಿ, ‘ಪಾಲೆಮಾರ್ ಕನೈನನ್ ಸೆಂಟರ್ ನಿಂದ ಬರುವ ಆದಾಯದ ಬಹುಪಾಲನ್ನು ವಿಕಾಸ ಎಜುಕೇಶನ್ ಟ್ರಸ್ಟ್ ಮೂಲಕ ಬಡ ವಿದ್ಯಾರ್ಥಿಗಳ ಶಿಕ್ಷಣ ಹಾಗೂ ಶೈಕ್ಷಣಿಕ ಪ್ರೋತ್ಸಾಹಕ್ಕಾಗಿ ವಿನಿಯೋಗಿಸಲಾಗುವುದು. ಈ ಸಭಾಂಗಗಳು ಸಾಮಾನ್ಯ ಜನರಿಗೂ ಕೈಗೆಟುಕುವ ದರದಲ್ಲಿ ದೊರೆಯುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಾನಿಧ್ಯ ಸಂಸ್ಥೆ, ಸೇವಾಶ್ರಮದ ಗೀತಾ ಶೆಟ್ಟಿ, ಸಮಾಜ ಸೇವಕಿ ತಬುಸ್ಸಮ್, ವಿಶೇಷ ಚೇತನ ಕಲಾವಿದ ಕೌಶಿಕ್ ಆಚಾರ್ಯ, ಪ್ರತಿಭಾವಂತರಾದ ಮಹಾಲಕ್ಷ್ಮಿ ಪೈ, ಮಹಾಲಕ್ಷ್ಮಿ ಭಾರ್ಗವ್, ದೀಶಾ ಪೂಜಾರಿ ಹಾಗೂ ಸಭಾಂಗಣ ನಿರ್ಮಾಣದ ಇಂಜಿನಿಯರ್ಗಳಾದ ಪ್ರವೀಣ್ ಕುಮಾರ್ ಮತ್ತು ಕೊರಗಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮವನ್ನು ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಮಾರಂಭದಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರುಗಳಾದ ಡಾ. ವೈ. ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹಾಗೂ ಟ್ರಸ್ಟಿಗಳಾದ ಜೆ.ಕೆ. ರಾವ್, ಕೊರಗಪ್ಪ, ಜೆ. ಸಂತೋಷ್ ಪಾಲೆಮಾರ್, ಸೂರಜ್ ಕುಮಾರ್ ಕಲ್ಯ, ಪ್ರದೀಪ್ ಪಾಲೆಮಾರ್ ಮತ್ತು ಪ್ರಸನ್ನ ಪಾಲೆಮಾರ್ ಉಪಸ್ಥಿತರಿದ್ದು ಅತಿಥಿಗಳನ್ನು ಸ್ವಾಗತಿಸಿದರು.











