ಮಂಗಳೂರು, ಜ.30 : ತಪಸ್ಯಾ ಫೌಂಡೇಶನ್ ವತಿಯಿಂದ ದ.ಕ. ಜಿಲ್ಲಾಡಳಿತ ಹಾಗೂ ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿ ಜನವರಿ 31 ರಿಂದ ಫೆಬ್ರವರಿ 2ರ ತನಕ ತಣ್ಣೀರುಬಾವಿಯ ಮಂಗಳೂರು ಸರ್ಫ್ ಕ್ಲಬ್ ಬೀಚ್ನಲ್ಲಿ ಮಂಗಳೂರು ಬೀಚ್ ಫೆಸ್ಟಿವಲ್ ಹಾಗೂ ಮಂಗಳೂರು ಟ್ರಯಾಥಾನ್ ಆಯೋಜಿಸಲಾಗಿದೆ.
ಜನವರಿ 31ರಂದು ಸಂಜೆ 5.30ಗಂಟೆಗೆ ಬೀಚ್ ಫೆಸ್ಟಿವಲ್ ಉದ್ಘಾಟನಾ ಸಮಾರಂಭ ನಡೆಯಲಿದ್ದು,ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸುವರು. ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಸ್ಪೀಕರ್ ಯು.ಟಿ. ಖಾದರ್, ಸಚಿವರಾದ ಎಚ್.ಕೆ.ಪಾಟೀಲ್, ಎನ್.ಚಲುವರಾಯಸ್ವಾಮಿ, ಜಿಲ್ಲೆಯ ಸಂಸದರು, ಶಾಸಕರು, ಗಣ್ಯರು ಉಪಸ್ಥಿತರಿರುವರು. ಶಾಸಕ ಡಾ.ವೈ.ಭರತ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಪಸ್ಯಾ ಫೌಂಡೇಶನ್ನ ಸ್ಯಾಪಕಿ ಸಬಿತಾ ಶೆಟ್ಟಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಫೆಬ್ರವರಿ 1ರಂದು ಸಂಜೆ 5ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಟಾಟಾ ಸ್ಮಾರಕ ಆಸ್ಪತ್ರೆಯ ಉಪ ನಿರ್ದೇಶಕ ಡಾ. ಶೈಲೇಶ್ ಶ್ರೀಖಂಡೆ ಮತ್ತು ಕಟೀಲು ಸಂಜೀವಿನ ಆಸ್ಪತ್ರೆಯ ಡಾ. ಸುರೇಶ್ ರಾವ್ ಅವರಿಗೆ ಜೀವಮಾನ ಸಾಧನಾ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕ್ಯಾನ್ಸರ್ ಪೀಡಿತರ ಆರೈಕೆ ಕೇಂದ್ರಕ್ಕೆ ನೆರವಾಗುವ ಉದ್ದೇಶದಿಂದ ದೇಣಿಗೆ ಸಂಗ್ರಹಕ್ಕಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ತಪಸ್ಯಾ ಫೌಂಡೇಶನ್ನ ನಿರ್ದೇಶಕ ನವೀನ್ ಹೆಗ್ಡೆ ಮಾತನಾಡಿ ಬೀಚ್ ಫೆಸ್ಟಿವಲ್ಲ ಜತೆಗೆ ವಿವಿಧ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿವೆ. ಜನವರಿ 31ರಂದು ಬೆಳಗ್ಗೆ 10ರಿಂದ ಕೃಷಿ ಮೇಳ, ಮಹಿಳಾ ಉದ್ಯಮಿಗಳ ಎಕ್ಸ್ಪೋ ನವನಾರಿ ಉದ್ಯಮಿ, ಫುಡ್ ಫೆಸ್ಟಿವಲ್, ವಿಜ್ಞಾನ ಮಾದರಿ ಪ್ರದರ್ಶನ ನಡೆಯಲಿದೆ. ಬೆಳಗ್ಗೆ 9ರಿಂದ ರಾಷ್ಟ್ರೀಯ ಮಟ್ಟದ ಬೀಚ್ ವಾಲಿಬಾಲ್ ಹಾಗೂ ಸಂಜೆ 5ರಿಂದ ರಾಜ್ಯ ಮಟ್ಟದ ಕುಸ್ತಿ ಪಂದ್ಯಾಟ ಏರ್ಪಡಿಸಲಾಗಿದೆ. ರಾತ್ರಿ 8ಕ್ಕೆ ಮಲ್ಲಕಂಬ ಪ್ರದರ್ಶನವಿದೆ ಎಂದರು.
ಫೆಬ್ರವರಿ 1ರಂದು ಬೆಳಗ್ಗೆ 10ರಿಂದ ಕೃಷಿ ಮೇಳ, ನವನಾರಿ ಉದ್ಯಮಿ, ಆಹಾರ ಉತ್ಸವ, ವಿಜ್ಞಾನ ಮಾದರಿ ಪ್ರದರ್ಶನ, ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಉಚಿತ ಕ್ಯಾನ್ಸರ್ ತಪಾಸಣೆ ಆಯೋಜಿಸಲಾಗಿದೆ. ಸಂಜೆ 5 ಗಂಟೆಗೆ ಬೈಕ್ ಸ್ಟಂಟ್, 7.15ಕ್ಕೆ ಕಳರಿಪಯಟ್ಟು ಪ್ರದರ್ಶನ, ರಾತ್ರಿ 8 ಗಂಟೆಗೆ ಮೂಸಿಕಲ್ ನೈಟ್ ಕಾರ್ಯಕ್ರಮ ನಡೆಯಲಿದೆ . ಫೆ.2ರಂದು ಮುಂಜಾನೆ 4.30ಕ್ಕೆ ಮ್ಯಾರಥಾನ್ ಆರಂಭಗೊಳ್ಳಲಿದೆ. ಬೆಳಗ್ಗೆ 6.30ಕ್ಕೆ ಮಂಗಳೂರು ಟ್ರಯಾಥಾನ್ ನಡೆಯಲಿದೆ. ಟ್ರಯಾಥಾನ್ ಗೆ 5 ಸಾವಿರ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಸಂಜೆ 5ಕ್ಕೆ ಸ್ಮಾರ್ಟ್ ಅಫ್ ಫೆಸ್ಟ್ , 7ಕ್ಕೆ ಸಾಂಪ್ರದಾಯಿಕ ಫ್ಯಾಶನ್ ಶೋ, ರಾತ್ರಿ 8ಕ್ಕೆ ನಿಹಾಲ್ ತಾವೂ ಅವರಿಂದ ಸಂಗೀತ ಕಾರ್ಯಕ್ರಮ, ರಾತ್ರಿ 10 ಗಂಟೆಗೆ ಸಿಡಿಮದ್ದು ಪ್ರದರ್ಶನ ನಡೆಯಲಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಫೌಂಡೇಶನ್ನ ಸದಸ್ಯರಾದ ವಿಶಾಲ್ ರಾವ್, ಮೋಹನ್ ಶೆಟ್ಟಿ, ಅರವಿಂದ್ ಉಪಸ್ಥಿತರಿದ್ದರು.