ಮಂಗಳೂರು, ಮೇ 22 : ಶ್ರೀ ಕಲ್ಲುರ್ಟಿ ದೈವಸ್ಥಾನ ಚೆಂಡೆ ಮತ್ತು ಪುಳಿಂಚ ಸೇವಾ ಪ್ರತಿಷ್ಠಾನದ ಆಶ್ರಯದಲ್ಲಿ ಯಕ್ಷಗಾನದ ನವರಸ ನಾಯಕ ದಿವಂಗತ ಪುಳಿಂಚ ರಾಮಯ್ಯ ಶೆಟ್ಟಿಯವರ ಸರಣಾರ್ಥ ಪಂಚಮ ತ್ರೈವಾರ್ಷಿಕ ಪುಳಿಂಚ ಪ್ರಶಸ್ತಿ ಪ್ರದಾನ ಸಮಾರಂಭ ಮೇ 24ರಂದು ಬಂಟ್ವಾಳ ತಾಲೂಕು ಬಾಳ್ತಿಲದ ಶ್ರೀ ಕಲ್ಲುರ್ಟಿ ದೈವಸ್ಥಾನ ಚೆಂಡೆಯಲ್ಲಿ ಜರಗಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಶ್ರೀಧರ್ ಶೆಟ್ಟಿ ಪುಳಿಂಚ ಅವರು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು , ಸಮಾರಂಭದಲ್ಲಿ ತೆಂಕುತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದರಾದ ಬೋಳಾರ ಸುಬ್ಬಯ್ಯ ಶೆಟ್ಟಿ ಸಂಜಯ ಕುಮಾರ್ ಶೆಟ್ಟಿಗೋಣಿಬೀಡು ಮತ್ತು ಮಿಜಾರು ತಿಮ್ಮಪ್ಪ ಅವರು 2023-25ನೇ ಸಾಲಿನ ಪುಳಿಂಚ ಪ್ರಶಸ್ತಿಯನ್ನು ಸ್ವೀಕರಿಸುವರು. ಖ್ಯಾತ ಹಾಸ್ಯಗಾರ ದಿ| ಬಂಟ್ವಾಳ ಜಯರಾಮ ಆಚಾರ್ಯರಿಗೆ ಮರಣೋತ್ತರ ಪ್ರಶಸ್ತಿಯನ್ನು ನೀಡಲಾಗುವುದು ಎಂದರು.
ಪುತ್ತೂರು ವಿವೇಕಾನಂದ ವಿದ್ಯಾ ವರ್ಧಕ ಸಂಘದ ಅಧ್ಯಕ್ಷ ಡಾ| ಕಲ್ಲಡ್ಕ ಪ್ರಭಾಕರ್ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸುವರು. ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಅಧ್ಯಕ್ಷತೆ ವಹಿಸುವರು. ಆರ್.ಎಸ್.ಎಸ್ ಮುಖಂಡ ಪ್ರಕಾಶ್ ಪಿ.ಎಸ್. ಕೃತಿ ಬಿಡುಗಡೆ ಮಾಡುವರು. ದೈವಜ್ಞ ಶಶಿಕುಮಾರ್ ಪಂಡಿತ್, ಶಾಸಕ ರಾಜೇಶ್ ನ್ಯಾಕ್ ಹಾಗೂ ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು ಎಂದು ತಿಳಿಸಿದರು.
ಸಮಾರಂಭದಲ್ಲಿ ಭಾಸ್ಕರ್ ರೈ ಕುಕ್ಕುವಳ್ಳಿಯವರ ‘ಮಹಿಮೆಯ ಮಹಾಮಾತೆ ಚೆಂಡೆ ಶ್ರೀ ಕಲ್ಲುರ್ಟಿ’ ಶ್ರೀ ಕ್ಷೇತ್ರ ಚೆಂಡೆ ಕಲ್ಲುರ್ಟಿ ದೈವಸ್ಥಾನದ ಕ್ಷೇತ್ರ ಪರಿಚಯ ಕೃತಿಯನ್ನು ಲೋಕಾರ್ಪಣೆಗೊಳಿಸಲಾಗುವುದು. ಭಾಸ್ಕರ ರೈ ಕುಕ್ಕುವಳ್ಳಿ ಮತ್ತು ಶಶಿರಾಜ್ ರಾವ್ ಕಾವೂರು ರಚಿಸಿದ ಕ್ಷೇತ್ರದ ತುಳು ಕನ್ನಡ ಭಕ್ತಿ ಗೀತೆಯ ಧ್ವನಿ ಮುದ್ರಿಕೆ ಬಿಡುಗಡೆಗೊಳಿಸಲಾಗುವುದು. ಇದೇ ಸಂದರ್ಭದಲ್ಲಿ ಪುಳಿಂಚ ಚಿಟ್ಸ್ ನ ದಶಮಾನೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಮೇ 23 ರ ಸಂಜೆ 6 ಗಂಟೆಗೆ ಶ್ರೀ ಕಟೀಲು ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನದ ಮಂಡಳಿಯವರಿಂದ ‘ಶ್ರೀ ದೇವಿ ಮಹಾತ್ಮ’ ಯಕ್ಷಗಾನ ಬಯಲಾಟ ಜರಗಲಿದೆ. ಮೇ 24 ರಂದು ‘ಪುಳಿಂಚ ಸದನ’ ನೂತನ ಗೃಹ ಪ್ರವೇಶದ ಸಲುವಾಗಿ ಭಜನೆ ನಡೆಯಲಿದೆ. ಯಕ್ಷಗಾನ ಹಾಸ್ಯ ಕಲಾವಿದ ದಿನೇಶ್ ಶೆಟ್ಟಿಗಾರ್ ಕೋಡಪದವು ಮತ್ತು ಭಾಗವತ ಗಿರೀಶ್ ರೈ ಕಕ್ಕೆಪದವು ಅವರ ನೇತೃತ್ವದಲ್ಲಿ ‘ಕುರುಬನ ರಾಣಿ’ ಹಾಸ್ಯ ಪ್ರಸಂಗದ ಬಯಲಾಟ, ಪ್ರಶಂಶ ಕಾಪು ತಂಡದಿಂದ ಬಲೆ ತೆಲಿಪಾಲೆ’ ಕಾಮಿಡಿ ಶೋ, ರಾತ್ರಿ ಚಾಪರ್ಕ ಕಲಾವಿದರಿಂದ ‘ಪುದರ್ ದೀತಿಜಿ’ ನಾಟಕ ಪ್ರದರ್ಶನಗೊಳ್ಳಲಿದೆ. ನವೀಕೃತ ದೈವಸ್ಥಾನದಲ್ಲಿ ರಾತ್ರಿ ದೊಂದಿ ಬೆಳಕಿನಲ್ಲಿ ಶ್ರೀ ಚೆಂಡೆ ಕಲ್ಲುರ್ಟಿ ದೈವದ ತ್ರೈವಾರ್ಷಿಕ ಕೋಲ ಹಾಗೂ ನಾಲ್ಕು ಹರಕೆಯ ಕೋಲಗಳು ನಡೆಯಲಿವೆ ಎಂದು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಪ್ರಶಸ್ತಿ ಆಯ್ಕೆ ಸಮಿತಿಯ ಸಲಹೆಗಾರ ಭಾಸ್ಕರ್ ರೈ ಕುಕ್ಕುವಳ್ಳಿ, ಪ್ರತಿಷ್ಠಾನದ ಕೋಶಾಧಿಕಾರಿ ಪ್ರತಿಭಾ ಎಸ್. ಶೆಟ್ಟಿ ಪುಳಿಂಚ, ಯಕ್ಷಗಾನ ಸಂಘಟಕ ಜನಾರ್ಧನ ಅಮ್ಮುಂಜೆ, ಸತೀಶ್ ಪೂಜಾರಿ ಚೆಂಡೆ ಉಪಸ್ಥಿತರಿದ್ದರು.