ಕುಂದಾಪುರ, ನ. 04 : ಅಯ್ಯಪ್ಪ ಸ್ವಾಮಿ ಶಿಬಿರದಿಂದ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಅಯ್ಯಪ್ಪ ವೃತಧಾರಿಗಳು ಕಾಲ್ನಡಿಗೆಯಲ್ಲಿ ಸಾಗುತ್ತಿದ್ದ ವೇಳೆ ಹಿಂಬದಿಯಿಂದ ವೇಗವಾಗಿ ಬಂದ ದ್ವಿಚಕ್ರ ವಾಹನವೊಂದು ಢಿಕ್ಕಿಯಾಗಿ ಓರ್ವ ಮಾಲಾಧಾರಿ ಗಂಭೀರ ಗಾಯಗೊಂಡು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದು ಇನ್ನೋರ್ವ ಮಾಲಾಧಾರಿ ಗಾಯಗೊಂಡ ಘಟನೆ ಕುಂದಾಪುರ ತಾಲೂಕಿನ ತೆಕ್ಕಟ್ಟೆ ಸಮೀಪದ ಕಣ್ಣುಕೆರೆ ಎಂಬಲ್ಲಿ ನಡೆದಿದೆ.
ಮೃತರನ್ನು ಕೋಟೇಶ್ವರ ಸಮೀಪದ ಕುಂಬ್ರಿ ನಿವಾಸಿ ಮಾಲಾಧಾರಿಯಾಗಿದ್ದ ಸುರೇಂದ್ರ ಮೊಗವೀರ (35) ಎಂದು ಗುರುತಿಸಲಾಗಿದೆ.
ನವಂಬರ್ 2 ರಂದು ಮುಂಜಾನೆ 5.30ರ ಹೊತ್ತಿಗೆ ಸುಮಾರು 15 ಜನ ಅಯ್ಯಪ್ಪ ಮಾಲಾಧಾರಿಗಳು ಕೋಟೇಶ್ವರ ಮಾರ್ಗವಾಗಿ ಮಂದಾರ್ತಿ ದೇವಸ್ಥಾನಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದಾಗ ಕಣ್ಣುಕೆರೆ ಸಮೀಪದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಟಿವಿಎಸ್ ಎಕ್ಸೆಲ್ ದ್ವಿಚಕ್ರ ವಾಹನವು ಸುರೇಂದ್ರ ಅವರಿಗೆ ಢಿಕ್ಕಿಯಾಗಿ ಅವರ ತಲೆಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾರೆ. ಇನ್ನೋರ್ವ ರು ಗಾಯಗೊಂಡಿದ್ದಾರೆ.
ಕೋಟ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.











