ಮಂಗಳೂರು, ನ. 22 : ನರರೋಗ, ಮಾನಸಿಕ ಅಸ್ವಸ್ಥತೆ, ಅಲೈಮರ್, ಪಾರ್ಶ್ವವಾಯು ಹಾಗೂ ಕ್ಯಾನ್ಸರ್ ಸೇರಿದಂತೆ ದೀರ್ಘಕಾಲೀನ ಕಾಯಿಲೆಗಳೊಂದಿಗೆ ಹೋರಾಟ ನಡೆಸುತ್ತಿರುವವರಿಗೆ ಸಹಾಯಕವಾಗುವ ಉದ್ದೇಶದಿಂದ ಕಾಸರಗೋಡಿನ ದೈಗೋಳಿಯಲ್ಲಿ ನವಚೇತನ ಕೇರ್ ಸೆಂಟರ್ ಹೊಸ ಆರೈಕೆ ಘಟಕದ ಉದ್ಘಾಟನೆ ನವೆಂಬರ್ 23, 2025, ಭಾನುವಾರ ಮಧ್ಯಾಹ್ನ 2 ಗಂಟೆಗೆ ಸಾಯಿ ನಿಕೇತನ ಸೇವಾಶ್ರಮದಲ್ಲಿ ನಡೆಯಲಿದೆ ಎಂದು ನವಚೇತನ ಕೇರ್ ಸೆಂಟರ್ನ ಸಂಸ್ಥಾಪಕ ಹಾಗೂ ಭಟ್ ಬಯೋಟೆಕ್ ಚೇರ್ಮನ್ ಡಾ. ಶ್ಯಾಂ ಭಟ್ ಅವರು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ವೇಗದ ಜೀವನಶೈಲಿ, ಕುಟುಂಬಗಳ ಆರೈಕೆ ಸವಾಲು, ಹಾಗೂ ಮನೆಯಲ್ಲಿನ ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದ ದೀರ್ಘಕಾಲೀನ ಕಾಯಿಲೆಗಳ ನಿತ್ಯ ನಿರ್ವಹಣೆ ಕಷ್ಟಕರವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಮನೆಯಿಂದ ಹೊರಗೆ ಆದರೆ ಮನೆ ವಾತಾವರಣದಲ್ಲಿ, 24×7 ವೈದ್ಯಕೀಯ ಮೇಲ್ವಿಚಾರಣೆಯೊಂದಿಗೆ ಆರೈಕೆ ಒದಗಿಸುವ ವ್ಯವಸ್ಥೆ ಜನರಿಗೆ ಅಗತ್ಯವಾಗಿದೆ. ಈ ಬೇಡಿಕೆಯನ್ನು ಮನಗಂಡು ನವಚೇತನ ಕೇರ್ ಸೆಂಟರ್ನ್ನು ದೈಗೋಳಿಯಲ್ಲಿ ಸ್ಥಾಪಿಸುತ್ತಿದ್ದೇವೆ ಎಂದರು.
ನವಚೇತನ ಕೇರ್ ಸೆಂಟರ್ 18 ಹಾಸಿಗೆ ಸಾಮರ್ಥ್ಯದ ಈ ವಿಶೇಷ ಆರೈಕೆ ಘಟಕವನ್ನು ಆರಂಭಿಸುತ್ತಿದೆ. ಈ ಕೇಂದ್ರದಲ್ಲಿ 24/7 ವೈದ್ಯಕೀಯ ಮೇಲ್ವಿಚಾರಣೆ, ಫಿಸಿಯೋಥೆರಪಿ, ವೃತ್ತಿಪರ ಥೆರಪಿ, ವೈಯಕ್ತಿಕ ಆರೈಕೆ, ಮಾನಸಿಕ ಹಾಗೂ ಭಾವನಾತ್ಮಕ ಬೆಂಬಲ, ಅಂತಹ ಸೌಲಭ್ಯಗಳನ್ನು ಒದಗಿಸಲಾಗುತ್ತದೆ ಎಂದು ಹೇಳಿದರು.
ಭಾರತದಲ್ಲಿ 60 ವರ್ಷ ಮೇಲ್ಪಟ್ಟ ಹಿರಿಯರಲ್ಲಿ 7.4% ಮಂದಿ ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, 3.69 ಮಿಲಿಯನ್ ಅಮರ್ ರೋಗಿಗಳು, 14.6 ಲಕ್ಷ ಕ್ಯಾನ್ಸರ್ ಪೀಡಿತರು ದೇಶದಲ್ಲಿ ಇದ್ದಾರೆ ಎಂಬ ಮಾಹಿತಿಯನ್ನು ಅವರು ಹಂಚಿಕೊಂಡರು. ಇಂತಹ ಗಂಭೀರ ಆರೋಗ್ಯ ಸಮಸ್ಯೆಗಳು ಕುಟುಂಬಗಳ ಮೇಲೆ ಭಾರವಾಗಬಾರದು. ಗುಣಮಟ್ಟದ ದೀರ್ಘಕಾಲೀನ ಆರೈಕೆಗೆ ಸುಲಭ ಪ್ರವೇಶ ದೊರಕುವಂತೆ ಮಾಡುವದೇ ಈ ಕೇಂದ್ರದ ಉದ್ದೇಶ. ಈ ಯೋಜನೆ ನವಚೇತನ ಕೇರ್ ಸೆಂಟರ್ ಹಾಗೂ ದೈಗೋಳಿಯ ಶ್ರೀ ಸಾಯಿ ನಿಕೇತನ ಸೇವಾಶ್ರಮದ ಸಂಯುಕ್ತ ಪ್ರಯತ್ನವಾಗಿದೆ ಎಂದರು.
ಶ್ಯಾಮ್ ಭಟ್ ಪತ್ನಿ ಶಾರದಾ ಭಟ್, ಸಿಇಒ ಪವನ್ ಕುಮಾರ್, ಪುಕಾಶ್ ಇಳಂತಿಲ ಮತ್ತಿತರರು ಉಪಸ್ಥಿತರಿದ್ದರು.











