ಗೋವಾ, ಏ. 28 : ಎಂಸಿಸಿ ಬ್ಯಾಂಕ್ ವತಿಯಿಂದ ಏಪ್ರಿಲ್ 25 ಮತ್ತು 26ರಂದು ಗೋವಾದ ಕೋರ್ಟ್ ಯಾರ್ಡ್ ಬೈ ಮೆರಿಟ್ಟ್ ನಲ್ಲಿ ಅಂತರರಾಜ್ಯ ಬ್ಯಾಂಕಿಂಗ್ ಸಂವಾದವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಬ್ಯಾಂಕಿನ ಹಿರಿಯ ಅಧಿಕಾರಿಗಳು, ಶಾಖಾ ವ್ಯವಸ್ಥಾಪಕರು, ಪೆಕ್ರಡಿಟ್ ಅಧಿಕಾರಿಗಳು, ಮುಂದಿನ ವ್ಯವಸ್ಥಾಪಕರು ಹಾಗೂ ನಿರ್ದೇಶಕ ಮಂಡಳಿಯ ಸದಸ್ಯರು ಭಾಗವಹಿಸಿದ್ದರು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಬದಲಾಗುತ್ತಿರುವ ಪರಿಸ್ಥಿತಿಗಳನ್ನು ಚರ್ಚಿಸುವುದು ಹಾಗೂ ಅಂತರರಾಜ್ಯ ಸಹಕಾರವನ್ನು ಉತ್ತೇಜಿಸುವುದು ಈ ಸಂವಾದದ ಮುಖ್ಯ ಉದ್ದೇಶವಾಗಿತ್ತು.
ಈ ಸಂವಾದದ ಉದ್ಘಾಟನಾ ಕಾರ್ಯಕ್ರಮದಲ್ಲಿ ಎಂಸಿಸಿ ಬ್ಯಾಂಕ್ ಅಧ್ಯಕ್ಷರಾದ ಸಹಕಾರ ರತ್ನ ಅನಿಲ್ ಲೋಬೋ ಅವರು ಅಧ್ಯಕ್ಷತೆ ವಹಿಸಿದ್ದರು. ಅನಿಲ್ ಲೋಬೋ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಬ್ಯಾಂಕಿನ ನಿರಂತರ ಬೆಳವಣಿಗೆಗೆ ಬಲವಾದ ನಾಯಕತ್ವ, ನಿಷ್ಠಾವಂತ ಸಿಬ್ಬಂದಿ ಮತ್ತು ಗ್ರಾಹಕರ ವಿಶ್ವಾಸವೇ ಕಾರಣವಾಗಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೇಗವಾಗಿ ನಡೆಯುತ್ತಿರುವ ಬದಲಾವಣೆಗಳ ಹಿನ್ನೆಲೆಯಲ್ಲಿ ನವೀನತೆ, ಡಿಜಿಟಲ್ ಪರಿವರ್ತನೆ ಮತ್ತು ಉತ್ತಮ ಗ್ರಾಹಕ ಸೇವೆಯನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯ ಎಂದು ಹೇಳಿದರು.
ವಂದನೀಯ ಫಾದರ್ ವಿಜಯ್ ಮಚಾದೊ ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ, ಎಂಸಿಸಿ ಬ್ಯಾಂಕಿನ ಸ್ಥಿರ ಬೆಳವಣಿಗೆ, ಉತ್ತಮ ನಿರ್ವಹಣೆ, ನಂಬಿಕೆ ಮತ್ತು ಸೇವೆಯ ಸಮರ್ಪಣೆಗಾಗಿ ಶ್ಲಾಘಿಸಿದರು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಮೌಲ್ಯಾಧಾರಿತ ಕಾರ್ಯಪದ್ಧತಿ ಅಗತ್ಯವೆಂದು ಹೇಳಿದ ಅವರು ನಂಬಿಕೆ, ತಂಡದ ಕೆಲಸ, ವಿವೇಕ, ಮೌಲ್ಯಮಾಪನ ಮತ್ತು ಸಕಾರಾತ್ಮಕ ಮನೋಭಾವ ಸೇರಿದಂತೆ ಯಶಸ್ಸಿಗೆ ಹತ್ತು ಮಾರ್ಗದರ್ಶಿ ತತ್ವಗಳನ್ನು ಅವರು ವಿವರಿಸಿದರು.
ಗೋಪಾಲಕೃಷ್ಣ ವೈ. ನಾಯಕ್, ವಾಲ್ಟರ್ ನಂದಳಿಕೆ ಅವರು ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದ ಅಂತ್ಯದಲ್ಲಿ ಭಾಗವಹಿಸಿದ ನಿರ್ದೇಶಕರು ಮತ್ತು ಸಿಬ್ಬಂದಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಮಹಾಪ್ರಬಂಧಕ ಸುನಿಲ್ ಮಿನೇಜಸ್ ಮತ್ತು ಉಪ ಮಹಾಪ್ರಬಂಧಕ ರಾಜ್ ಮಿನೇಜಸ್ ವಂದಿಸಿದರು. ಬ್ರಹ್ಮಾವರ ಶಾಖಾ ನಿರ್ದೇಶಕ ಶ್ರೀ ಓವಿನ್ ರೆಬೆಲ್ಲೊ ಸ್ವಾಗತಿಸಿ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಕೊಝಿಕೋಡ್ ನ ವಿಸಿಟಿಂಗ್ ಪ್ರೊಫೆಸರ್ ಹಾಗೂ ಚಾರ್ಟರ್ಡ್ ಅಕೌಂಟೆಂಟ್ ಸಿಜೆ ಲಾಯ್ನಲ್ ಅರಾನ್ಹಾ, ಮಿಲಾಗ್ರಿಸ್ ಕಾಲೇಜು ಕಲ್ಯಾಣಪುರದ ಪ್ರಾಂಶುಪಾಲರಾದ ಡಾ| ವಿನ್ಸೆಂಟ್ ಅಳ್ವ ಹಾಗೂ ಎಂಸಿಸಿ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಸುನಿಲ್ ಮೆನೇಜಸ್ ಉಪಸ್ಥಿತರಿದ್ದರು.











