ಪುತ್ತೂರು, ಮೇ. 21 : ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಲಾರಿಯೊಂದಕ್ಕೆ ಬೈಕೊಂದು ಢಿಕ್ಕಿ ಹೊಡೆದ ಪರಿಣಾಮ ಸವಾರ ಸಾವನ್ನಪ್ಪಿದ ಘಟನೆ ಮೇ.18,ಭಾನುವಾರ ತಡರಾತ್ರಿ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಪುತ್ತೂರು ನಗರದ ಉರ್ಲಾಂಡಿ ಬೈಪಾಸ್ ರಸ್ತೆಯಲ್ಲಿ ನಡೆದಿದೆ.
ಮೃತರನ್ನು ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಕುಂಜೂರು ಎಂಬಲ್ಲಿನ ನಿವಾಸಿ ಸುದೀಪ್(36) ಎಂದು ಗುರುತಿಸಲಾಗಿದೆ.
ಶಾಮಿಯಾನ ಸಾಗಿಸುತ್ತಿದ್ದ ಲಾರಿಯು ರಸ್ತೆ ಬದಿಯಲ್ಲಿ ಯಾವುದೇ ಮುನ್ನೆಚ್ಚರಿಕಾ ಫಲಕಗಳಿಲ್ಲದೆ ನಿಲ್ಲಿಸಲಾಗಿತ್ತು ಎಂಬ ಆರೋಪ ಕೇಳಿ ಬಂದಿದ್ದು, ಜೊತೆಗೆ ತುಂತುರು ಮಳೆಯಿಂದಾಗಿ, ಲಾರಿ ನಿಲ್ಲಿಸಿದ್ದ ಬಗ್ಗೆ ಅರಿವಿಗೆ ಬಾರದೆ ಸುದೀಪ್ ಚಲಾಯಿಸುತ್ತಿದ್ದ ಬೈಕ್ ನೇರವಾಗಿ ಲಾರಿಗೆ ಹಿಂಬದಿಯಿಂದ ಢಿಕ್ಕಿಯಾಗಿ ಸವಾರ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗಿದೆ.