ಮಂಗಳೂರು, ಮೇ. 27 : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಆಶ್ರಯದಲ್ಲಿ ಜೂ. 1ರಂದು ಭಾನುವಾರ ಅಡ್ಯಾರ್ ಗಾರ್ಡನ್ನಲ್ಲಿ “ಯಕ್ಷಧ್ರುವ ಪಟ್ಲ ದಶಮ ಸಂಭ್ರಮ 2025′ ರಾಷ್ಟ್ರೀಯ ಕಲಾ ಸಮ್ಮೇಳನ ನಡೆಯಲಿದೆ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಅವರು ಸೋಮವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿದ ಅವರು, ರಾಷ್ಟ್ರೀಯ ಕಲಾ ಸಮ್ಮೇಳನ ಬೆಳಗ್ಗೆ 9.30 ರಿಂದ ರಾತ್ರಿ 11ರವರೆಗೆ 9 ನಡೆಯಲಿದೆ. ಸ್ಪೀಕರ್ ಯು. ಟಿ. ಖಾದರ್ ಉದ್ಘಾ ಟಿಸುವರು. ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಆಶೀರ್ವಚನ ನೀಡುವರು. ಉದ್ಯಮಿ ಶಶಿಧರ ಬಿ. ಶೆಟ್ಟಿ ಅಧ್ಯಕ್ಷತೆ ವಹಿಸುವರು. ಬೆಳಗ್ಗೆ 11ಕ್ಕೆ ಡಾ ಎಂ. ಮೋಹನ ಆಳ್ವ ಅವರ ಉಪಸ್ಥಿತಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ರಾಷ್ಟ್ರೀಯ ಕಲಾ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ ಎಂದರು.
ಡಾ.ಆಳ್ವರ ನಿರ್ದೇಶನ ಮತ್ತು ಸಂಯೋಜನೆಯಲ್ಲಿ ಭಾರತದ 8 ಶಾಸ್ತ್ರೀಯ ಕಲೆಗಳ ಪ್ರದರ್ಶನ, ಯಕ್ಷ ಗಾನ ಹಾಗೂ ಭಾರತೀಯ ಕಲೆಗಳ ಛಾಯಾಚಿತ್ರ ಪ್ರದರ್ಶನ ನಡೆಯಲಿದೆ. ಮಧ್ಯಾಹ್ನ 1ಕ್ಕೆ ಸಭಾ ಕಾರ್ಯಕ್ರಮ ದಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನ ನೀಡುವರು. ಎಂಆರ್ಜಿ ಗ್ರೂಪ್ ಸಿಎಂಡಿ ಡಾ|ಕೆ.ಪ್ರಕಾಶ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಖ್ಯಾತ ಕ್ರಿಕೆಟ್ ಆಟಗಾರ ರೋಹಿತ್ ಶರ್ಮ ತಾರಾ ಮೆರುಗು ನೀಡಲಿದ್ದಾರೆ. ಸಂಜೆ 5.30ಕ್ಕೆ ಸಮಾರೋಪದಲ್ಲಿ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್ ಭಾಗವಹಿಸುವರು. ಮುಂಬಯಿನ ಹೇರಂಭ ಇಂಡಸ್ಟ್ರೀಸ್ ಸಿಎಂಡಿ ಕನ್ಯಾನ ಸದಾಶಿವ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದುಹೇಳಿದರು.
ಎಂಟು ತಂಡಗಳಿಂದ ತೆಂಕು ಮತ್ತು ಬಡಗು ತಿಟ್ಟಿನ ಯುವ ಕಲಾವಿದರಿಂದ ಯಕ್ಷಗಾನ ಸ್ಪರ್ಧೆ ನಡೆಯಲಿದೆ. ಟ್ರಸ್ಟ್ನಿಂದ ಅಶಕ್ತ ಕಲಾವಿದರಿಗೆ ಗೃಹ ನಿರ್ಮಾಣಕ್ಕೆ ಸಹಾಯಧನ, ಉಚಿತ ವೈದ್ಯಕೀಯ ತಪಾಸಣೆ, ವೈದ್ಯಕೀಯ ಆರ್ಥಿಕ ನೆರವು, ಕಣ್ಣಿನ ತಪಾಸಣೆ,ಕನ್ನಡಕ ಹಾಗೂ ಔಷಧ ವಿತರಣೆ ನಡೆಯಲಿದೆ ಎಂದರು.
ಯಕ್ಷಧ್ರುವ ಮಹಾಪೋಷಕ ಪ್ರಶಸ್ತಿಯನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮತ್ತು ಚಂದ್ರಿಕಾ ಶೆಟ್ಟಿ ದಂಪತಿಗೆ, ಒಂದು ಲಕ್ಷ ರೂ. ಗೌರವಧನ ಒಳಗೊಂಡ ಯಕ್ಷಧ್ರುವ ಪಟ್ಲ ಪ್ರಶಸ್ತಿಯನ್ನು ಹಿರಿಯ ಯಕ್ಷಗಾನ ಭಾಗವತ ಕುರಿಯ ಗಣಪತಿ ಶಾಸ್ತ್ರಿಯವರಿಗೆ ಪ್ರದಾನ ಮಾಡಲಾಗುವುದು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ 20,000 ರೂ. ನಗದು ಸಹಿತ ಯಕ್ಷಧ್ರುವ ಕಲಾ ಗೌರವ ನೀಡಲಾಗುವುದು ಎಂದುಹೇಳಿದರು.
ಯಕ್ಷಗಾನ, ನಾಟಕ ರಂಗಭೂಮಿ, ಕಂಬಳ ಮತ್ತು ದೈವಾರಾಧನೆ ಕ್ಷೇತ್ರದ 3,500 ಕಲಾವಿದರಿಗೆ ಅಪಘಾತ ವಿಮಾ ಯೋಜನೆ ಒದಗಿಸಲಾಗುವುದು. ಕಲಾವಿದರು ಒಂದು ಪ್ರತಿ ಭಾವಚಿತ್ರ ಹಾಗೂ ಕಲಾವಿದ ಹಾಗೂ ನಾಮಿನಿ ಆಧಾರ್ ಕಾರ್ಡ್ನೊಂದಿಗೆ ಹಾಜರಿರಬೇಕು. ಪಟ್ಲ ಸಂಭ್ರಮ ದಂದು ಬೆಳಗ್ಗೆ 8 ರಿಂದ ಸಂಜೆ 5ರ ತನಕ ಒಂದೇ ದಿನ ಮಾತ್ರ ನೋಂದಣಿಗೆ ಅವಕಾಶವಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್, ಕೋಶಾಧಿಕಾರಿ ಸಿಎ ಸುದೇಶ್ ಕುಮಾರ್ ರೈ, ಸಂಘಟನಾ ಕಾರ್ಯದರ್ಶಿ ಬಾಳ ಜಗನ್ನಾಥ ಶೆಟ್ಟಿ, ಪ್ರದೀಪ್ ಆಳ್ವ ಕದ್ರಿ, ಜತೆ ಕಾರ್ಯದರ್ಶಿಗಳಾದ ರವಿಚಂದ್ರ ಶೆಟ್ಟಿ ಅಶೋಕನಗರ, ರಾಜೀವ್ ಪೂಜಾರಿ ಕೈಕಂಬ, ಉದಯಕುಮಾರ್ ಶೆಟ್ಟಿ, ಭುಜಬಲಿ ಧರ್ಮಸ್ಥಳ, ಬೊಳಿಯಾರ್ ಸಂತೋಷ್ ರೈ, ಚಂದ್ರಹಾಸ ಶೆಟ್ಟಿ ರಂಗೋಲಿ, ಕರ್ನೂರು ಮೋಹನ್ ರೈ, ದೇವದಾಸ ಶೆಟ್ಟಿ ಬಂಟ್ವಾಳ, ಸರಪಾಡಿ ಅಶೋಕ ಶೆಟ್ಟಿ, ಸುಧಾಕರ ಪೂಂಜ ಸುರತ್ಕಲ್ ಮತ್ತಿತರರು ಉಪಸ್ಥಿತರಿದ್ದರು.