ಮಂಗಳೂರು, ಜೂ. 07 : ದ.ಕ.ಜಿಲ್ಲೆಯಲ್ಲಿ ಮುಸ್ಲಿಮರು ಬಕ್ರೀದ್ ಹಬ್ಬವನ್ನು ಸಂಭ್ರಮದಿಂದ ಇಂದು ಶನಿವಾರ ಆಚರಿಸಿದರು.
ನಗರದ ಲೈಟ್ಹೌಸ್ ಹಿಲ್ ರಸ್ತೆಯಲ್ಲಿರುವ ಬಾವುಟಗುಡ್ಡ ಈದ್ಗಾ ಮಸೀದಿಯಲ್ಲಿ ಮುಸ್ಲಿಮರು ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆಗಳಲ್ಲಿ ಭಾಗಿಯಾಗಿ ನಮಾಜ್ ಮಾಡಿದರು. ಮಸೀದಿಯಲ್ಲಿ ಪ್ರಾರ್ಥನೆಗಳು ಮುಗಿಯುತ್ತಿದ್ದಂತೆ, ಜನರು ಪರಸ್ಪರ ಅಪ್ಪಿಕೊಂಡು, ‘ಈದ್ ಮುಬಾರಕ್’ ನ ಆತ್ಮೀಯ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಶಾಸಕ ಜೆ.ಆರ್. ಲೋಬೊ. ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು. ಟಿ. ಖಾದರ್, ಝೀನತ್ ಭಕ್ ಮಸೀದಿ ಖತೀಬ್ ಸ್ವದಖತುಲ್ಲಾಹ್ ಫೈಝಿ, ಶಾಹ ಅಮೀರ್ ಮಸ್ಟಿದ ಇಮಾಮ್ ರಿಯಾಝುಲ್ ಹಖ್, ಕೇಂದ್ರ ಜುಮ್ಮಾ ಮಸೀದಿಯ ಆಡಳಿತ ಸಮಿತಿ ಉಪಾಧ್ಯಕ್ಷ ಕೆ. ಅಶ್ರಫ್, ಸದಸ್ಯರಾದ ಎಸ್. ಎಂ. ರಶೀದ್, ಖಜಾಂಚಿ ಸೈಯದ್ ಭಾಷಾ ತಂಗಳ್, ಮೊದಲಾದವರು ಉಪಸ್ಥಿತರಿದ್ದರು.
ಮಂಗಳೂರು ನಗರದ ಸೇರಿದಂತೆ ಕರಾ ವಳಿಯ ಬಹುತೇಕ ಎಲ್ಲ ಮಸೀದಿಗಳಲ್ಲೂ ಪ್ರಾರ್ಥನೆ, ಪ್ರವಚನ ನಡೆಯಿತು. ಈದ್ ಸಂದೇಶ ನೀಡಲಾಯಿತು. ನಮಾಝಿನ ಬಳಿಕ ಎಲ್ಲರೂ ಹಸ್ತಲಾಘವ, ಆಲಿಂಗನದ ಮೂಲಕ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಮನೆಗಳಲ್ಲೂ ಬಕ್ರೀದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.