ಮಂಗಳೂರು,ಜೂ,11 : ಭಾರತದ ಲೆಕ್ಕಪರಿಶೋಧಕರ ಸಂಸ್ಥೆ ಮಂಗಳೂರು ಶಾಖೆ ವತಿಯಿಂದ ಬೋರ್ಡ್ ಆಫ್ ಸ್ಟಡೀಸ್, ಐಸಿಎಐ ಮುಂದಾಳತ್ವದಲ್ಲಿ ‘ವಿಮರ್ಶ್’ ಜ್ಞಾನದ ಪಯಣವು ಸಮಸ್ಥಿತ ಬುದ್ಧಿಮತ್ತೆಯನ್ನು ಪ್ರಜ್ವಲಿಸುತ್ತದೆ ಎಂಬ ಶೀರ್ಷಿಕೆಯಡಿಯಲ್ಲಿ ಜೂ ನ್ 13 ಮತ್ತು 14ರಂದು ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಸಿಎ ವಿದ್ಯಾಥಿಗಳ ಮೆಗಾ ಸಮ್ಮೇಳನ ಆಯೋಜಿಸಲಾಗಿದೆ ಎಂದು ಶಾಖೆಯ ಅಧ್ಯಕ್ಷ ಪ್ರಶಾಂತ್ ಪೈ ಕೆ. ಅವರು ಮಂಗಳವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಯುನಿಕೋರ್ಟ್ ಐಎನ್ಸಿ, ಸಂಸ್ಥಾಪಕ ಮತ್ತು ಮುಖ್ಯ ತಾಂತ್ರಿಕ ಅಧಿಕಾರಿ ಪ್ರಶಾಂತ್ ಶೆಣೈ ಕಟ್ಟಾಡಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಬಳಿಕ ಐಸಿಎಐ ಬೋರ್ಡ್ ಆಫ್ ಸ್ಟಡೀಸ್ ಸದಸ್ಯರು ಮತ್ತು ವಿದ್ಯಾರ್ಥಿಗಳ ನಡುವೆ ಸಂವಾದ ನಡೆಯಲಿದೆ. ಐಸಿಎಐ ಮಂಗಳೂರು ಶಾಖೆಯ ಮತ್ತು ಎಸ್ ಐಸಿಎಎಸ್ ಪ್ರಮುಖ ಗಣ್ಯರು ಭಾಗವಹಿಸಲಿದ್ದಾರೆ. ದ್ವಿತೀಯ ದಿನ ನಿಕಟಪೂರ್ವ ಅಧ್ಯಕ್ಷ ಗೌತಮ್ ಪೈ ಅವರು ಸಮಾರೋಪ ಭಾಷಣಗೈದು ಬಹುಮಾನ ಪ್ರದಾನಿಸಲಿದ್ದಾರೆ. ಕಾರ್ಯಕ್ರಮದಲ್ಲಿ ದೇಶದ ಸುಮಾರು 1,000ಕ್ಕೂ ಹೆಚ್ಚು ಸಿಎ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಈ ಸಮ್ಮೇಳನದಲ್ಲಿ ವಿದ್ಯಾರ್ಥಿಗಳು, ಮಾರ್ಗದರ್ಶಕರು ಮತ್ತು ಉದ್ಯಮ ತಜ್ಞರು ಪರಸ್ಪರ ಸಂವಾದ, ಗುಂಪು ಚರ್ಚೆಗಳು ಮತ್ತು ಸಹಭಾಗಿತ್ವದ ಅಧ್ಯಯನಗಳ ಮೂಲಕ ಸಹಕಾರಾತ್ಮಕ ಅಧ್ಯಯನ ಅನುಭವವನ್ನು ಪಡೆಯಲಿದ್ದಾರೆ. ವಿವಿಧ ತಜ್ಞರಿಂದ ಅಧಿವೇಶನಗಳು ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶಾಖೆಯ ಉಪಾಧ್ಯಕ್ಷ ಡ್ಯಾನಿಯಲ್ ಮಾರ್ಷ್ ಪೆರೇರಾ, ಉಪಾಧ್ಯಕ್ಷೆ ಭೂಮಿಕಾ, ಕಾರ್ಯದರ್ಶಿ ಮಮ್ತಾ ರಾವ್, ಖಜಾಂಚಿ ಬಾಲಸುಬ್ರಹ್ಮಣ್ಯ ಎನ್., ಎಸ್ಐಸಿಎಎಸ್ ಅಧ್ಯಕ್ಷ ಬಂಟ್ವಾಳ ನಿತಿನ್ ಬಾಳಿಗ, ಕಾರ್ಯದರ್ಶಿ ಅದಿತಿ ಉಪಸ್ಥಿತರಿದ್ದರು.