ಮಂಗಳೂರು, ಜೂ. 11 :ಸರಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಮಂಗಳೂರಿನ ಮಾಜಿ ಶಾಸಕ ಬಿ.ಎ.ಮೊಯ್ದಿನ್ ಬಾವ ಹಾಗೂ ಅವರ ಇಬ್ಬರು ಸಹಚರರ ವಿರುದ್ಧ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಮಗಾರಿಯೊಂದರ ಬಿಲ್ ಮಂಜೂರು ಮಾಡುವ ವಿಷಯಕ್ಕೆ ನವಮಂಗಳೂರು ಬಂದರು ಪ್ರಾಧಿಕಾರದ ಉಪಾಧ್ಯಕ್ಷರ ಕಚೇರಿಗೆ ಮೊಹಿಯುದ್ದೀನ್ ಬಾವಾ ಇಬ್ಬರು ಸಹಚರರೊಂದಿಗೆ ಜೂನ್ 9 ರಂದು ರಾತ್ರಿ ನುಗ್ಗಿ, 15 ನಿಮಿಷ ಕಾಲ ಅವರ ಕರ್ತವ್ಯಕ್ಕೆ ಅಡ್ಡಿ ಪಡಿಸಿ, ಉಪಾಧ್ಯಕ್ಷರು ಕಚೇರಿಯಿಂದ ಹೊರ ಹೋಗಲು ಅವಕಾಶ ನೀಡದೇ, ಅವರನ್ನು ತಡೆದು ನಿಲ್ಲಿಸಿದ್ದಾರೆ. ನಂತರ ಅವರು ಹೊರಗೆ ಬಂದಾಗಲೂ ಹಿಂಬಾಲಿಸುತ್ತಾ ಬೆದರಿಕೆ ಹಾಕಿದ್ದಾರೆ. ಬೇರೆ ಕರ್ತವ್ಯದ ಸಲುವಾಗಿ ಕಾರಿನಲ್ಲಿ ಹೋಗುತ್ತಿರುವಾಗ ಕಾರನ್ನು ತಡೆದು ನಿಲ್ಲಿಸಿ ವಾಗ್ವಾದ ಮಾಡಿದ್ದಾರೆ ಎಂದು ಎನ್ಎಂಪಿಟಿ ಕಾರ್ಯದರ್ಶಿಯವರು ಮಂಗಳವಾರ ಪಣಂಬೂರು ಠಾಣೆಯಲ್ಲಿ ದೂರು ನೀಡಿದ್ದಾರೆ.
ಪಣಂಬೂರು ಠಾಣೆಯಲ್ಲಿ ಮೊಹಿಯುದ್ದೀನ ಬಾವ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 224, ಸೆಕ್ಷನ್ 221 ಮತ್ತು 132, ಸೆಕ್ಷನ್ 126 ಮತ್ತು 127 ಹಾಗೂ ಸೆಕ್ಷನ್ 226ರ ಅಡಿ ಪ್ರಕರಣ ದಾಖಲಾಗಿದ್ದು, ಈ ದೂರಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.