ಮಂಗಳೂರು, ಜೂ.20: ಹನಿಜೆನಿಕ್ಸ್ ಬೀ ಫಾರ್ಮ್ಸ್ ಮತ್ತು ರೋಟರಿ ಇಂಟರ್ ನ್ಯಾಷನಲ್ ಮಂಗಳೂರು ವತಿಯಿಂದ ಜೂ.21 , 22ರಂದು ನಗರದ ಬೆಂದೂರ್ವೆಲ್ನ ಸೈಂಟ್ ಸೆಬಾಸ್ಟಿಯನ್ ಸಭಾಂಗಣದಲ್ಲಿ ‘ಕುಡ್ಲ ಪೆಲಕಾಯಿ ಪರ್ಬ’ವನ್ನು ಆಯೋಜಿಸಲಾಗಿದೆ ಎಂದು ಸಂಯೋಜಕ ಅಶ್ವಿನ್ ಸಿಕ್ವೇರಾ ಬುಧವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜು.21ರ ಪೂರ್ವಾಹ್ನ 10 ಗಂಟೆಗೆ ಕಾರ್ಯಕ್ರಮದ ಉದ್ಘಾಟನೆ ನೆರವೇರಲಿದೆ. ರಾತ್ರಿ 8 ಗಂಟೆಯವರೆಗೆ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆಯಿದ್ದು ರಾಜ್ಯದ ವಿವಿಧ ಜಿಲ್ಲೆಗಳು ಕೃಷಿಕರು ಭಾಗವಹಿಸಲಿದ್ದಾರೆ. ಸ್ಥಳೀಯ ಕೃಷಿ, ಆಹಾರ ಪರಂಪರೆ ಮತ್ತು ಉದ್ಯಮಶೀಲನತೆಯನ್ನು ಉತ್ತೇಜಿಸಲು ಈ ಪೆಲಕಾಯಿ ಪರ್ಬದ ಆಯೋಜನೆಯಾಗಿದೆ ಎಂದು ತಿಳಿಸಿದರು.
ರಾಮನಗರದಿಂದ ನಾಲ್ಕು ಮಂದಿ ರೈತರು ಮಾವು, ಚಿಕ್ಕಬಳ್ಳಾಪುರ ಮತ್ತು ಸ್ಥಳೀಯ ರೈತರು ಹಲಸು, ಮಡಿಕೇರಿಯಿಂದ ಬೆಣ್ಣೆ ಹಣ್ಣು ಹಾಗೂ ಕಿತ್ತಳೆ, ಬೆಂಗಳೂರಿನಿಂದ ವಿವಿಧ ಹಣ್ಣುಗಳ ಮೌಲ್ಯವರ್ಧಿತ ಉತ್ಪನ್ನಗಳು ಸೇರಿದಂತೆ ಸ್ಥಳೀಯವಾಗಿ, ಹಲಸಿನ ಹಣ್ಣಿನಿಂದ ತಯಾರಿಸಿದ ವಿವಿಧ ಖಾದ್ಯಗಳು ಪರ್ಬದಲ್ಲಿರಲಿವೆ. ಹಲಸಿನ ಪ್ರಿಯರಿಗೆ ಇದೊಂದು ಹಬ್ಬವಾಗಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಆಯೋಜನಾ ಸಮಿತಿಯ ಸಹಾಯಕ ಸಂಯೋಜಕರಾದ ಶ್ರೀಕಾಂತ್ ಪೈ, ಜಾಕ್ಸನ್ ಸಲ್ಡಾನ, ಸದಸ್ಯ ವೀವನ್ ಪಿಂಟೋ ಉಪಸ್ಥಿತರಿದ್ದರು.