ಮಂಗಳೂರು, ನ. 20 : ನವಂಬರ್ 21 ರಂದು “ವಾದಿರಾಜ ವಾಲಗ ಮಂಡಳಿ” ಕನ್ನಡ ಚಲನಚಿತ್ರಕ್ಕೆ ಉರ್ವ ಮಾರಿಯಮ್ಮನ ಸಾನಿಧ್ಯದಲ್ಲಿ ಮುಹೂರ್ತ ನಡೆಯಲಿದೆ ಎಂದು ಚಲನ ಚಿತ್ರ ನಿರ್ಮಾಪಕ ಡಾ ಎಂ.ಎನ್. ರಾಜೇಂದ್ರಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಎಂ.ಎನ್.ಆರ್ ಪ್ರೊಡಕ್ಷನ್ ಸಂಸ್ಥೆಯು 2009ರಲ್ಲಿ ಆರಂಭಗೊಂಡಿದ್ದು, “ಜೋಗುಳ” ಎಂಬ ಮೆಗಾ ಧಾರಾವಾಹಿಯನ್ನು ಕಿರುತೆರೆಗೆ ಅರ್ಪಿಸಿದೆ. ಹಾಗೇನೇ, ನಿರ್ದೇಶಕ ಎಂ.ಡಿ.ಶ್ರೀಧರ ಅವರ ನಿರ್ದೇಶನದಲ್ಲಿ “ಗಲಾಟೆ” ಎಂಬ ಸಿನೆಮಾ ನಟ ಪ್ರಜ್ವಲ್ ದೇವರಾಜ್ ಹಾಗೂ ಬಹುತಾರಾಗಣದಲ್ಲಿ ನಿರ್ಮಾಣವಾಗಿದ್ದು, ಇದು ಬಹುಪಾಲು ವಿದೇಶದಲ್ಲಿ ಚಿತ್ರೀಕರಣಗೊಂಡಿದೆ. ಈ “ಗಲಾಟೆ” ಚಲನಚಿತ್ರ ‘ಎಂ.ಎನ್.ಆರ್ ಪ್ರೊಡಕ್ಷನ್’ ಸಂಸ್ಥೆಯ ಮೊದಲ ಚಲನಚಿತ್ರವಾಗಿದೆ ಎಂದರು.
‘ಎಂ.ಎನ್.ಆರ್ ಪ್ರೊಡಕ್ಷನ್’ ಸಂಸ್ಥೆ ತುಳುನಾಡಿನ ಸಂಸ್ಥೆಯಾಗಿರುವುದರಿಂದ ತುಳುಭಾಷೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈಗಾಗಲೇ ವಿಜಯಕುಮಾರ್ ಕೊಡಿಯಾಲ್ಬೈಲ್ ನಿರ್ದೇಶನದ “ಡಾಕ್ಟ್ರಾ.ಭಟ್ರಾ?” ಎನ್ನುವ ತುಳು ಸಿನೆಮಾ ಮುಹೂರ್ತ ಮಾಡಲಾಗಿದ್ದು, ಈ ಸಿನೆಮಾ ಮುಂದಿನ ವರ್ಷ ತೆರೆಕಾಣಲಿದೆ ಎಂದು ತಿಳಿಸಿದರು.
ಈ ಮಧ್ಯೆ ಯುವ ನಿರ್ದೇಶಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಯುವ ನಿರ್ದೇಶಕ, ಕಾಂತಾರ ಸಿನೆಮಾದ “ವರಾಹ ರೂಪಂ’ “ಕಾಂತಾರ-1” ರ “ಗೊತ್ತಿಲ್ಲಾ ಶಿವನೇ ಭಕ್ತಿ ದಾರಿಯು” ಹಾಡುಗಳನ್ನು ರಚಿಸಿರುವ ಶಶಿರಾಜ್ ರಾವ್ ಕಾವೂರು ರಚಿಸಿರುವ ಕಥೆ. ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಇರುವ “ವಾದಿರಾಜ ವಾಲಗ ಮಂಡಳಿ” ಎಂಬ ಕನ್ನಡ ಸಿನೆಮಾವನ್ನು ತೆರೆಗೆ ಸಿದ್ಧಪಡಿಸುತ್ತಿದ್ದೇವೆ ಎಂದರು.
ಈ ಸಿನೆಮಾದಲ್ಲಿ ನವೀನ್ ಡಿ ಪಡೀಲ್, ಲಕ್ಷ್ಮಣ ಕುಮಾರ್ ಮಲ್ಲೂರು, ದೀಪಕ್ ರೈ ಪಾಣಾಜೆ, ಪುಕಾಶ ತುಮಿನಾಡು. ಪುಷ್ಪರಾಜ್ ಬೊಕ್ಯೂರ್. ಮೈಮ್ ರಾಮದಾಸ್, ಶೋಭರಾಜ್ ಪಾವೂರು, ತನ್ವಿ ರಾವ್. ವೇನ್ಯ ರೈ, ಚೈತ್ರಾ ಶೆಟ್ಟಿ, ಕೀರ್ತನಾ ಮುಂತಾದವರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಲಿದ್ದಾರೆ ಎಂದು ತಿಳಿಸಿದರು.
ನಿರ್ದೇಶಕ ಶಶಿರಾಜ್ ಕಾವೂರು ಮಾತಾಡಿ , ಈ ಚಿತ್ರಕ್ಕೆ ಸಂಗೀತ ಮಣಿಕಾಂತ ಕದ್ರಿಯವರಿದ್ದು, ಸಹ ನಿರ್ಮಾಪಕರಾಗಿ ಜಯಪ್ರಕಾಶ ತುಂಬೆ ಹಾಗೂ ಕಾರ್ಯಕಾರಿ ನಿರ್ಮಾಪಕರಾಗಿ ನಟ ಸಂತೋಷ್ ಶೆಟ್ಟಿ ಸಹಕರಿಸಲಿದ್ದಾರೆ.ಸಿನಿಮಾಕ್ಕೆ ಒಂದೇ ಹಂತದಲ್ಲಿ 40 ದಿನಗಳ ಕಾಲ ಕಾಸರಗೋಡು, ಮಂಗಳೂರು, ಉಡುಪಿ, ಕುಂದಾಪುರ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಗೋಪಿನಾಥ ಭಡ್, ಸಂತೋಷ್ ಶೆಟ್ಟಿಜಯಪುಕಾಶ್ ತುಂಬೆ, ಎಸ್ ಚಂದ್ರಶೇಖರನ್, ಲಕ್ಷ್ಮಣಕುಮಾರ್ ಮಲ್ಲೂರು ಉಪಸ್ಥಿತರಿದ್ದರು.











