Subscribe to Updates
Get the latest creative news from FooBar about art, design and business.
Author: admin
ಪುಂಜಾಲಕಟ್ಟೆ, ಆ. 11 : ಅಂಗನವಾಡಿ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ಅಂಗನವಾಡಿ ಸಹಾಯಕಿಯೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ಬಡಗ ಕಜೆಕಾರು ಗ್ರಾಮದ ಕೆದಿಮೇಲು ಎಂಬಲ್ಲಿಆ.6ರಂದು ನಡೆದಿದೆ. ಮೃತರನ್ನು ಅಂಗನವಾಡಿ ಸಹಾಯಕಿ ಕನೆಜಾಲು ನಿವಾಸಿ ವಸಂತಿ ಕೆದಿಮೇಲು (43) ಎಂದು ಗುರುತಿಸಲಾಗಿದೆ. ಅಂಗನವಾಡಿ ಕೇಂದ್ರದಲ್ಲಿ ಕರ್ತವ್ಯದಲ್ಲಿದ್ದ ವೇಳೆ ಅಂಗನವಾಡಿ ಸಹಾಯಕಿ ವಸಂತಿ ನಾಯ್ಕ್ ಅವರು ಕುಸಿದು ಬಿದ್ದು ಅಸೌಖ್ಯಕ್ಕೀಡಾಗಿದ್ದರು. ಇವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಮಂಗಳೂರು, ಆ,10: ಕ್ವಿಟ್ ಇಂಡಿಯಾ ಚಳುವಳಿ ವರ್ಷಾಚರಣೆ ಅಂಗವಾಗಿ ಗೋವಾ ಸ್ವಾತಂತ್ರ್ಯ ಹೋರಾಟಗಾರರಾದ ಮಟ್ಟಾರ್ ವಿಠ್ಠಲ್ ಕಿಣಿ ಅವರನ್ನು ಆ.09, ಬುಧವಾರ ಸನ್ಮಾನಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ನಗರದ ಭೋಜರಾವ್ ಲೈನ್ ನಲ್ಲಿರುವ ಅವರ ಸ್ವಗೃಹ ಕ್ಕೆ ತೆರಳಿ ಜಿಲ್ಲಾಡಳಿತ ಪರವಾಗಿ ಅವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಮಂಗಳೂರು ಉಪವಿಭಾಗಾಧಿಕಾರಿ ಹರ್ಷವಧನ್, ತಹಶೀಲ್ದಾರ್ ಪ್ರಶಾಂತ್ ಪಾಟೀಲ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳಿದ್ದರು.
ಪುತ್ತೂರು, ಆ. 09 : ತೆಂಗಿನ ಮರ ಹತ್ತಿ ತೆಂಗಿನಕಾಯಿ ಕೀಳುವ ಕಾಯಕದಲ್ಲಿ ಪ್ರಸಿದ್ದಿ ಪಡೆದಿದ್ದ ಮಹಿಳೆಯೊಬ್ಬರು ತೆಂಗಿನ ಮರದಿಂದ ಕೆಳೆಗೆ ಬಿದ್ದು ಸಾವನ್ನಪ್ಪಿದ ಘಟನೆ ಕಡಬ ತಾಲೂಕಿನ ಸವಣೂರು ಸಮೀಪದ ಪುಣ್ಚಪ್ಪಾಡಿ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಪ್ರಮೋದ್ ಬೊಳ್ಳಾಜೆ ಪತ್ನಿ ಸುಚಿತ್ರಾ (30) ಎಂದು ಗುರುತಿಸಲಾಗಿದೆ. ಸುಚಿತ್ರ ಅವರು ಮಹಿಳೆಯಾಗಿ ತೆಂಗಿನಕಾಯಿ ಕೀಳುವ ಕಾಯಕದಲ್ಲಿ ತೊಡಕಿಸಿಕೊಂಡಿದ್ದರಿಂದ ಅವರ ಈ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಹಲವಾರು ಸಂಘ-ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿತ್ತು. ಮೃತರು ಪತಿ, ಇಬ್ಬರು ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
ಸುಳ್ಯ, ಆ. 08 : ಅರಂತೋಡಿಯಲ್ಲಿ ಪಾದಚಾರಿಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಉಳುವಾರು ನಿವಾಸಿ ತೀರ್ಥರಾಮ ಎಂದು ಗುರುತಿಸಲಾಗಿದೆ. ಪಾದಚಾರಿ ತೀರ್ಥರಾಮ ಅವರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಓಮಿನಿ ಕಾರೊಂದು ಢಿಕ್ಕಿ ಹೊಡೆದಿದ್ದು, ಗಂಭೀರವಾಗಿ ಗಾಯಗೊಂಡ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆತಂದರಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಸುಳ್ಯ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಂಗಳೂರು, ಆ. 07 : ಸ್ಯಾಂಡಲ್ ವುಡ್ ನಟ ವಿಜಯರಾಘವೇಂದ್ರ ಅವರ ಪತ್ನಿ ಸ್ಪಂದನಾ ವಿಜಯರಾಘವೇಂದ್ರ ಅವರು ವಿದೇಶದಲ್ಲಿ ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರು ತಮ್ಮ ಪತಿ ವಿಜಯ್ ಜತೆಗೆ ಬ್ಯಾಂಕಾಕ್ಗೆ ತೆರಳಿದ್ದರು. ಈ ವೇಳೆ ಹಾರ್ಟ್ ಅಟ್ಯಾಕ್ ಆಗಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಸ್ಪಂದನಾ ಅವರು ನಿವೃತ್ತ ಪೊಲೀಸ್ ಅಧಿಕಾರಿ ಶಿವರಾಂ ಅವರ ಪುತ್ರಿಯಾಗಿದ್ದು ವಿಜಯರಾಘವೇಂದ್ರ ಅವರನ್ನು 2007, ಆಗಸ್ಟ್ 26 ರಂದು ಮದುವೆಯಾಗಿದ್ದರು. ವಿಜಯರಾಘವೇಂದ್ರ ಹಾಗೂ ಸ್ಪಂದನಾರದ್ದು ಪ್ರೇಮವಿವಾಹವಾಗಿತ್ತು. ನಟಿ ಸ್ಪಂದನಾ 2016ರಲ್ಲಿ ಬಿಡುಗಡೆಯಾದ ಅಪೂರ್ವ ಸಿನೆಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದರು.
ಕಾರ್ಕಳ, ಆ. 05 : ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಪಲ್ಟಿಯಾದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಶುಕ್ರವಾರ ಸಂಭವಿಸಿದೆ. ರೆನಾಲ್ಟ್ ಡಸ್ಟರ್ ಕಾರು ಶುಕ್ರವಾರ ಮುಂಜಾನೆ ಕಾಡುಹೊಳೆ ಕಡೆಯಿಂದ ಕಾರ್ಕಳದ ಕಡೆಗೆ ಹೋಗುತ್ತಿದ್ದಾಗ ಹಿರ್ಗಾನ ಗ್ರಾಮದ ನೆಲ್ಲಿಕಟ್ಟೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಚಾಲಕ ಯಾವುದೇ ಗಾಯಗಳಿಲ್ಲದೇ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎನ್ನಲಾಗಿದೆ.
ಕಾಸರಗೋಡು, ಆ. 03 : ನೀರಿನ ಹೊಂಡದಲ್ಲಿ ಮುಳುಗಿ ವಿದ್ಯಾರ್ಥಿಯೋರ್ವ ಸಾವನ್ನಪ್ಪಿದ ಘಟನೆ ನೀಲೇಶ್ವರ ಬಂಗಳದಲ್ಲಿ ಜು.31,ಸೋಮವಾರ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಬಂಗಳ ಕರಿಕುಂಡುವಿನ ಅಲ್ಬಿನ್ ಸೆಬಾಸ್ಟಿಯನ್ (16) ಎಂದು ಗುರುತಿಸಲಾಗಿದೆ, ಸೋಮವಾರ ಸಂಜೆ ಸಹಪಾಠಿಗಳ ಜೊತೆ ಮನೆ ಸಮೀಪದ ಗಣಿಗಾರಿಕೆ ನಡೆಸಿದ ಸ್ಥಳದಲ್ಲಿದ್ದ ನೀರಿನ ಹೊಂಡದಲ್ಲಿ ಸ್ನಾನಕ್ಕಿಳಿದ ಸಂದರ್ಭದಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಮಂಗಳವಾರ ಅಗ್ನಿಶಾಮಕ ದಳದ ಸಿಬ್ಬಂದಿಗಳು, ಕಣ್ಣೂರಿನಿಂದ ಆಗಮಿಸಿದ ಮುಳುಗು ತಜ್ಞರು ಶೋಧ ನಡೆಸಿ ಮೃತ ದೇಹವನ್ನು ಮೇಲ ಕ್ಕೆತ್ತಿದ್ದಾರೆ.
ಮಂಗಳೂರು, ಜು. 30 : ರೈಲು ಡಿಕ್ಕಿಯಾಗಿ ವ್ಯಕ್ತಿಯೊರ್ವರು ಸಾವನ್ನಪಿರುವ ಘಟನೆ ಪಚ್ಚನಾಡಿ ರೈಲ್ವೆ ಬ್ರಿಜ್ಡ್ ಬಳಿ ನಡೆದಿದೆ. ಮೃತ ಅಪರಿಚಿತ ವ್ಯಕ್ತಿಯ ವಯಸ್ಸು ಸುಮಾರು 52 ವರ್ಷ. ಮತ್ಯ್ಸಗಂಧ ರೈಲು ಢಿಕ್ಕಿ ಹೊಡೆದು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಸ್ಥಳಕ್ಕೆ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಾಸರಗೋಡು, ಜು, 28: ಮನೆ ಸಮೀಪದ ಆವರಣ ಇಲ್ಲದ ಬಾವಿಗೆ ಬಿದ್ದು ಪಾಕತಜ್ಞರೋರ್ವರು ಸಾವನ್ನಪ್ಪಿದ ಘಟನೆ ಪೆರ್ಲ ಸಮೀಪದ ಕಾಟುಕುಕ್ಕೆ ಕುಡ್ತಡ್ಕದಲ್ಲಿ ಗುರುವಾರ ನಡೆದಿದೆ. ಮೃತರನ್ನುಜನಾರ್ಧನ ನಾಯಕ್(42) ಎಂದು ಗುರುತಿಸಲಾಗಿದೆ. ಸಂಜೆ ನೀರು ಸೇದಲು ಹೋಗಿದ್ದ ಸಂದರ್ಭದಲ್ಲಿ ಕಾಲು ಜಾರಿ ಆಕಸ್ಮಿಕವಾಗಿ ಬಾವಿಗೆ ಬಿದ್ದಿರಬಹುದೆಂದು ಶಂಕಿಸಲಾಗಿದೆ. ತವರು ಮನೆಗೆ ತೆರಳಿದ್ದ ಪತ್ನಿ ಮತ್ತು ಮಗು ಸಂಜೆ ಮನೆಗೆ ಬಂದಾಗ ಜನಾರ್ಧನ ನಾಪತ್ತೆಯಾಗಿದ್ದು, ಪರಿಸರ ವಾಸಿಗಳಿಗೆ ತಿಳಿಸಿದ್ದರು. ಹುಡುಕಟ ನಡೆಸಿದಾಗ ಬಾವಿಗೆ ಬಿದ್ದಿರುವುದು ಪತ್ತೆಯಾಗಿದೆ. ಪರಿಸರವಾಸಿಗಳು ಮತ್ತು ಮುಳುಗು ತಜ್ಞರ ಸಹಾಯದಿಂದ ಮೃತ ದೇಹವನ್ನು ಮೇಲಕ್ಕೆತ್ತಲಾಯಿತು ಎಂದು ವರದಿಯಾಗಿದೆ.
ರೋಡ್ಸ್, ಜು. 27 : ಕಾಡ್ಗಿಚ್ಚು ನಂದಿಸಲು ಬಂದಿದ್ದ ಅಗ್ನಿಶಾಮಕ ವಿಮಾನವು ಮರಕ್ಕೆ ಡಿಕ್ಕಿ ಹೊಡದು ಪತನಗೊಂಡು ಇಬ್ಬರು ಪೈಲಟ್ಗಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಗ್ರೀಸ್ನಲ್ಲಿ ನಡೆದಿದೆ. ಎವಿಯಾ ದ್ವೀಪದಲ್ಲಿರುವ ಕಾಡಿನಲ್ಲಿ ಕಾಡ್ಗಿಚ್ಚಿನಿಂದಾಗಿ ಬೆಂಕಿ ಧಗಧಗಿಸುತ್ತಿತ್ತು, ಬೆಂಕಿಯನ್ನು ನಂದಿಸಲು ಗ್ರೀಕ್ ವಾಟರ್ ಬಾಂಬ್ ವಿಮಾನವು ಬಂದಿತ್ತು, ಬೆಂಕಿಗೆ ನೀರು ಹಾಯಿಸುತ್ತಿರುವಾಗ ವಿಮಾನವು ಮರಕ್ಕೆ ಡಿಕ್ಕಿ ಹೊಡೆದು ವಿಮಾನಕ್ಕೆ ಬೆಂಕಿ ಹೊತ್ತಿಕೊಂಡು ಇಬ್ಬರು ಪೈಲಟ್ಗಳು ಸುಟ್ಟು ಕರಕಲಾಗಿದ್ದಾರೆ ಎಂದು ವರದಿಯಾಗಿದೆ.












