Subscribe to Updates
Get the latest creative news from FooBar about art, design and business.
Author: admin
ಮಂಗಳೂರು, ಜೂ. 17 : ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಮುಲೈ ಮುಹಿಲನ್ ಎಂ.ಪಿ. ಅವರು ಜೂ.17, ಶನಿವಾರ ಅಧಿಕಾರ ಸ್ವೀಕರಿಸಿದರು. ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದಎಂ.ಆರ್.ರವಿಕುಮಾರ್ ಅವರು ನೂತನ ಜಿಲ್ಲಾಧಿಕಾರಿಗೆ ಅಧಿಕಾರ ಹಸ್ತಾಂತರ ಮಾಡಿದರು. ಮುಲೈ ಮುಹಿಲನ್ ಅವರು ಇದಕ್ಕೂ ಮೊದಲು ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್ ಬೆಂಗಳೂರು ಇದರ ಕಾರ್ಯಕಾರಿ ನಿರ್ದೇಶಕರಾಗಿದ್ದರು.
ಕೊಡಗು ಜೂ. 17 : ಬುಲೆಟ್ ಬೈಕ್ ಹಾಗೂ ಸ್ಕೂಟಿ ನಡುವೆ ಅಪಘಾತ ಸಂಭವಿಸಿ ಎಫ್ ಎಂಸಿ ಕಾಲೇಜು ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕುಶಾಲನಗರ ಪಟ್ಟಣದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು ಮಡಿಕೇರಿಯ ಭಾವನಾ(21) ಎಂದು ಗುರುತಿಸಲಾಗಿದೆ. ಭಾವನಾ ಸ್ಕೂಟಿಯಲ್ಲಿ ಹೋಗುತ್ತಿದ್ದಾಗ ಬುಲೆಟ್ ಬೈಕ್ ಸ್ಕೂಟಿಗೆ ಅಪ್ಪಳಿಸಿದೆ. ಈ ವೇಳೆ ಭಾವನಾ ಮೃತಪಟ್ಟಿದ್ದಾಳೆ ಎನ್ನಲಾಗಿದೆ. ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು, ಜೂ. 16 : ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ರವಿ ಕುಮಾರ್ ಅವರನ್ನು ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಶುಕ್ರವಾರ ಆದೇಶ ಹೊರಡಿಸಿದೆ. ದ. ಕ. ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಸ್ಮಾರ್ಟ್ ಗವರ್ನೆನ್ಸ್ ಬೆಂಗಳೂರು ಇದರ ಕಾರ್ಯನಿರ್ವಾಹಕ ನಿರ್ದೇಶಕ ಮುಲೈ ಮುಹಿಲನ್ ಎಂ.ಪಿ. ನೇಮಕಗೊಂಡಿದ್ದಾರೆ. ಮುಲ್ಲೈ ಮುಹಿಲನ್ ಅವರು ತಮಿಳುನಾಡು ಮೂಲದವರಾಗಿದ್ದು, ದಿಂಡಿಗಲ್ ಅಣ್ಣಾ ವಿಶ್ವವಿದ್ಯಾಲಯದ ಪಿಎಸ್ಎನ್ಎ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿನಲ್ಲಿ ಓದಿ ಕಂಪ್ಯೂಟರ್ ವಿಷಯದಲ್ಲಿ ಪದವಿ ಪಡೆದಿದ್ದಾರೆ.
ಕುಂದಾಪುರ, ಜೂ. 1 5: ಕುಂದಾಪುರ ತಾಲೂಕಿನ ತೆಕ್ಕಟ್ಟೆ ಗ್ರಾಮಪಂಚಾಯತ್ ವ್ಯಾಪ್ತಿಯ ಮಾಲಾಡಿ ಎಂಬಲ್ಲಿ ಅರಣ್ಯ ಇಲಾಖೆ ಇಟ್ಟ ಬೋನಿಗೆ ನಾಲ್ಕರಿಂದ ಐದು ವರ್ಷ ಪ್ರಾಯದ ಗಂಡು ಚಿರತೆ ಬಿದ್ದಿದೆ.ಕಳೆದ ಐದು ವರ್ಷಗಳಲ್ಲಿಈ ಪ್ರದೇಶದಲ್ಲಿಟ್ಟ ಬೋನಿಗೆ ಬಿದ್ದ8ನೇ ಚಿರತೆ ಇದಾಗಿದೆ. ಈ ಪ್ರದೇಶದಲ್ಲಿ ಹಿಂದೆ ಏಳು ಚಿರತೆಗಳನ್ನು ಅರಣ್ಯ ಇಲಾಖೆ ಬೋನಿಟ್ಟು ಬಂಧಿಸಿತ್ತು. ಮತ್ತೆ ಈಚೆಗೆ ಈ ಪ್ರದೇಶದಲ್ಲಿ ಚಿರತೆಗಳು ಓಡಾಡುತ್ತಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿತ್ತು. ಇದೀಗ 8ನೇ ಚಿರತೆಯ ಬಂಧನವಾಗಿದ್ದು ಇಲ್ಲಿನ ಜನ ಭಯಭೀತರಾಗಿದ್ದಾರೆ.
ನೆಲ್ಯಾಡಿ, ಜೂ. 14 : ಟಿಪ್ಪರ್ ಹಾಗೂ ಸ್ಕೂಟರ್ ನಡುವೆ ನಡೆದ ಅಪಘಾತದಲ್ಲಿ ಸ್ಕೂಟರ್ ಸವಾರ ಸಾವನ್ನಪ್ಪಿದ ಘಟನೆ ಮಂಗಳೂರಿನ ಪಂಪ್ವೆಲ್ ನಲ್ಲಿ ನಡೆದಿದೆ. ಇಚ್ಚಂಪಾಡಿ ಇಲ್ಲುಂಗಲ್ ನಿವಾಸಿ ಆಂಟನಿ ಹಾಗೂ ವಾಮನ ದಂಪತಿ ಪುತ್ರ ಸಂದೇಶ್ (25) ಮೃತಪಟ್ಟ ಯುವಕ. ಸಂದೇಶ್ ಅವರು ಬೆಂದೂರ್ವೆಲ್ನಲ್ಲಿರುವ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದು, ರಾತ್ರಿ ಪಾಳಿಯ ಕೆಲಸ ಮುಗಿಸಿ ಸ್ಕೂಟಿಯಲ್ಲಿ ರೂಮ್ ಗೆ ತೆರಳುವ ವೇಳೆ ಪಂಪ್ ವೆಲ್ ನಲ್ಲಿ ಅಪಘಾತ ಸಂಭವಿಸಿದೆ. ಗಂಭೀರ ಗಾಯಗೊಂಡಿದ್ದ ಸಂದೇಶ್ ಅವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಉಡುಪಿ, ಜೂ. 14 : ಖ್ಯಾತ ಸ್ಯಾಕ್ಸೋಫೋನ್ ವಾದಕ, ಮತ್ತು ಸ್ಯಾಕ್ಸೋಫೋನ್ ಗುರು ಉಡುಪಿಯ ಅಲೆವೂರು ಮೂಲದ ಸುಂದರ ಸೇರಿಗಾರ (76) ಅವರು ಜೂ. 14, ಬುಧವಾರ ನಿಧನರಾಗಿದ್ದಾರೆ. ಸುಂದರ ಸೇರಿಗಾರ ಅವರು ಇಂಟರ್ನ್ಯಾಷನಲ್ ವರ್ಚುವಲ್ ಪೀಸ್ ಯುನಿವರ್ಸಿಟಿ ಯಿಂದ ಗೌರವ ಡಾಕ್ಟರೇಟ್ ಪದವಿಯನ್ನು ಮತ್ತು ವಿವಿಧ ಸಂಘ ಸಂಸ್ಥೆಗಳಿಂದ ಗೌರವವನ್ನು ಕೂಡಾ ಪಡೆದಿದ್ದರು. ಜಿಲ್ಲೆಯ ವಿವಿಧ ದೇವಸ್ಥಾನಗಳಲ್ಲಿ ಉತ್ಸವ ಸಂಧರ್ಭದಲ್ಲಿ ಸುಂದರ ಸೇರಿಗಾರ ಅವರು ಸೇವೆಯನ್ನು ನಡೆಸಿಕೊಡುತ್ತಿದ್ದರು.ಅವರ ಮೊಮ್ಮಗಳು ಪೂಜಾ ದೇವಾಡಿಗ ಮುಂಬಯಿಯಲ್ಲಿ ಖ್ಯಾತ ಸ್ಯಾಕ್ಸೋಫೋನಿಸ್ಟ್ ಆಗಿದ್ದಾರೆ. ಸುಂದರ ಸೇರಿಗಾರ ಅವರು ಓರ್ವ ಪುತ್ರ, ಮೂವರು ಪುತ್ರಿಯರು ಹಾಗೂ ಅಪಾರ ಬಂಧು ಬಾಂಧವರನ್ನು ಅಗಲಿದ್ದಾರೆ.
ಪುತ್ತೂರು, ಜೂ. 05 : ಮರದ ದಿಮ್ಮಿಯನ್ನುವಾಹನಕ್ಕೆ ಲೋಡ್ ಮಾಡುತ್ತಿರುವಾಗ ಮರದ ದಿಮ್ಮಿ ಮೈ ಮೇಲೆ ಬಿದ್ದು ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆ ಪುತ್ತೂರಿನ ಸುಳ್ಯಪದವು ಎಂಬಲ್ಲಿ ಜೂ.5, ಸೋಮವಾರ ನಡೆದಿದೆ. ಮೃತ ವ್ಯಕ್ತಿಯನ್ನು ಪಡುವನ್ನೂರು ಗ್ರಾಮದ ಸುಳ್ಯ ಪದವು ಬಟ್ಟ್ಯಂಗಳ ನಿವಾಸಿ ಗೋಪಾಲಕೃಷ್ಣ ಎಂದು ಗುರುತಿಸಲಾಗಿದೆ. ಗೋಪಾಲಕೃಷ್ಣ ತನ್ನ ಮನೆ ಸಮೀಪವಿರುವ ಮಾವಿನ ಮರದ ದಿಮ್ಮಿಗಳನ್ನು ಜೆಸಿಬಿ ಮೂಲಕ ಟಿಪ್ಪರ್ ವಾಹನಕ್ಕೆ ಲೋಡ್ ಮಾಡುತ್ತಿದ್ದು, ಟಿಪ್ಪರ್ನ ಹಿಂದಿನ ಬಾಗಿಲನ್ನು ಸರಿಪಡಿಸುವ ವೇಳೆ ಮರದ ದಿಮ್ಮಿ ಮೈಮೇಲೆ ಬಿದ್ದಿದೆ. ಈ ಪರಿಣಾಮ ಗಂಭೀರ ಗಾಯಗೊಂಡಿದ್ದ ಗೋಪಾಲಕೃಷ್ಣ ಅವರನ್ನು ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೃತರು ತಾಯಿ, ಪತ್ನಿ, ಮೂವರು ಮಕ್ಕಳನ್ನು ಅಗಲಿದ್ದಾರೆ.
ಉಳ್ಳಾಲ, ಜೂ. 04: ಟೊಯಿಂಗ್ ವಾಹನ ಢಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ ಪಾದಚಾರಿ ವೃದ್ದರೋರ್ವರು ಮೃತಪಟ್ಟಿರುವ ಘಟನೆ ತೊಕ್ಕೊಟ್ಟು ಕಲ್ಲಾಪು ರಾ.ಹೆ.66 ರಲ್ಲಿ ಜೂ . 2, ಶುಕ್ರವಾರ ನಡೆದಿದೆ. ಟೋಯಿಂಗ್ ವಾಹನ ಉಳ್ಳಾಲ ಕಡೆಗೆ ತೆರಳುತ್ತಿದ್ದ ವೇಳೆ ಕಲ್ಲಾಪು ಎಂಬಲ್ಲಿ ಪಾದಚಾರಿಗೆ ಢಿಕ್ಕಿ ಹೊಡೆದ ಪರಿಣಾಮ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಅಪಘಾತ ಸಂಭವಿಸಿ ಮೃತಪಟ್ಟ ವ್ಯಕ್ತಿ ಅಂದಾಜು 70ರ ಹರೆಯದವರಾಗಿದ್ದು, ಅವರ ಬಳಿ ಯಾವುದೇ ಗುರುತಿನ ಚೀಟಿಗಳು ಲಭ್ಯವಾಗಿಲ್ಲ. ವಾರೀಸುದಾರರಿದ್ದಲ್ಲಿ ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.
ಕುಲಶೇಖರ,ಮೇ.27: ಕುಲಶೇಖರ ಶ್ರೀ ವೀರನಾರಾಯಣ ಕ್ಷೇತ್ರದಲ್ಲಿ ಶ್ರೀ ವೀರನಾರಾಯಣ ದೇವರಿಗೆ 74 ವರ್ಷದ ಬಳಿಕ ಬ್ರಹ್ಮಕಲಶಾಭಿಷೇಕವು ಉಡುಪಿಯ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಬಿ. ಶ್ರೀಪಾದರು, ಮಾಣಿಲ ಶ್ರೀಗಳ ಉಪಸ್ಥಿತಿಯಲ್ಲಿ ಕ್ಷೇತ್ರದ ತಂತ್ರಿಗಳ ನೇತೃತ್ವದಲ್ಲಿ ಮೇ.24,ಬುಧವಾರ ಬೆಳಗ್ಗೆ ಜರಗಿತು. ಬುಧವಾರ ಬೆಳಗ್ಗೆ ಕವಾಟೋದ್ಘಾಟನೆ, ತೈಲಾಭಿಷೇಕ, ಹೋಮ ಕಲಶಾಭಿಷೇಕ, ತತ್ತ್ವಕಲಶಾಭಿಷೇಕ, ಪರಿಕಲಶಾಭಿಷೇಕಕ್ಕೆ ಉಡುಪಿಯ ಪೇಜಾವರ ಶ್ರೀ ಗಳ ಉಪಸ್ಥಿತಿಯಲ್ಲಿ ನಡೆಯಿತು. ಪ್ರಾತಃ 8.05ರಿಂದ ಶ್ರೀ ವೀರನಾರಾಯಣ ದೇವರಿಗೆ ಬ್ರಹ್ಮಕಲಶಾಭಿಷೇಕ ಪ್ರಸನ್ನ ಪೂಜೆ, ಅವಸ್ರುತೋಕ್ಷಾ ಬಲಿ, ಮಹಾ ಮಂತ್ರಾಕ್ಷತೆ ನಡೆಯಿತು. ಮಧ್ಯಾಹ್ನ ಮಹಾಪೂಜೆ, ಬಲಿ ಹೊರಟು ಉತ್ಸವ, ರಥೋತ್ಸವ, ಪಲ್ಲ ಪೂಜೆ, ಮಹಾ ಅನ್ನಸಂತರ್ಪಣೆ, ಸಂಜೆ ರಂಗಪೂಜೆ, ಬಲಿ ಉತ್ಸವ, ರಥೋತ್ಸವ, ಪಲಕ್ಕಿ ಉತ್ಸವ, ವಸಂತ ಪೂಜೆ ನಡೆಯಿತು.ಈ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದಿದ್ದು, ಹೆಚ್ಚಿಗೆ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು, ಈ ಸಂದರ್ಭದಲ್ಲಿ ದೇವಸ್ಥಾನದ ಸಮಿತಿ ಪದಾಧಿಕಾರಿಗಳಾದ ಮಯೂರ್ ಉಳ್ಳಾಲ, ಪುರುಷೋತ್ತಮ ಕುಲಾಲ್ ಬಿ.ಪ್ರೇಮಾನಂದ ಕುಲಾಲ್, ಗೀತಾ ಮನೋಜ್, ಗಿರಿಧರ ಜೆ. ಮೂಲ್ಯ, ಬಿ.…
ಮೈಸೂರು, ಮೇ. 26 : ಜಿ.ಎಚ್.ನಾಯಕ ಎಂದು ಕನ್ನಡ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರಾಗಿದ್ದ ವಿಮರ್ಶಕರಾದ ಗೋವಿಂದರಾಯ ಹಮ್ಮಣ್ಣ ನಾಯಕ(88) ಅವರು ಶುಕ್ರವಾರ ನಿಧನ ಹೊಂದಿದ್ದಾರೆ. ಜಿ.ಎಚ್.ನಾಯಕ ಅವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಮುಂದೆ ಪ್ರಾಧ್ಯಾಪಕರಾಗಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದರು. ಎಚ್.ನಾಯಕ ಅವರು ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದರು. ಅವರು ಪತ್ನಿ ಮೀರಾ, ಪುತ್ರಿ ಕೀರ್ತಿ ಹಾಗೂ ಮೊಮ್ಮಗಳನ್ನು ಅಗಲಿದ್ದಾರೆ.