Subscribe to Updates
Get the latest creative news from FooBar about art, design and business.
Author: admin
ಬೆಳ್ತಂಗಡಿ, ಸೆ. 24 : ಮುಂಡಾಜೆಯ ಕಾಪುವಿನಲ್ಲಿರುವ ಅರಣ್ಯ ಇಲಾಖೆಯ ನರ್ಸರಿಗೆ ಕಾಡಾನೆಗಳು ನುಗ್ಗಿ ನರ್ಸರಿ ಗಿಡಗಳಿಗೆ ಅಪಾರ ಪ್ರಮಾಣದ ಹಾನಿ ಉಂಟು ಮಾಡಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಅರಣ್ಯ ಪ್ರದೇಶದಲ್ಲಿ ನಾಟಿ ಮಾಡಲು ಬೆಳೆಸಲಾಗಿದ್ದ ಬಿದಿರು, ಹಲಸು, ಹೆಬ್ಬಲಸು, ಗಾಳಿ, ಬಲಿಂದ್ರ ಪಾಲೆ ಜಾತಿಯ ಸುಮಾರು 3,200ಕ್ಕಿಂತ ಹೆಚ್ಚು ಗಿಡಗಳನ್ನು ಆನೆಗಳು ತುಳಿದು ಧ್ವಂಸಗೊಳಿಸಿವೆ. ಅರಣ್ಯ ಇಲಾಖೆಯ ಈ ನರ್ಸರಿ ರಾಷ್ಟ್ರೀಯ ಹೆದ್ದಾರಿಯಿಂದ 20 ಮೀ. ಅಂತರದಲ್ಲಿದ್ದು, ಆನೆಗಳು ಹೆದ್ದಾರಿ ಬದಿಯು ಸುಳಿದಾಡಿರುವ ಹೆಜ್ಜೆ ಗುರುತುಗಳು ಕಂಡುಬಂದಿವೆ. ಒಂದು ಮರಿಯಾನೆ ಸಹಿತ ಎರಡು ಆನೆಗಳು ದಾಳಿ ಇಟ್ಟಿರಬಹುದೆಂದು ಶಂಕಿಸಲಾಗಿದೆ. ಉಪವಲಯ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಂಗಳೂರು, ಸೆ. 23 : ಯುನಿಸೆಕ್ಸ್ ಸೆಲೂನ್ ಗಳಲ್ಲಿ ಕಾನೂನುಬಾಹಿರ ಚಟುವಟಿಕೆಗಳು ನಡೆದರೆ ಕಠಿನ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಎಚ್ಚರಿಕೆ ನೀಡಿದ್ದಾರೆ. ಯುನಿಸೆಕ್ಸ್ ಸೆಲೂನ್ ಗಳ ಹೆಸರಿನಲ್ಲಿ ಕೆಲವೆಡೆ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಪೊಲೀಸ್ ಇಲಾಖೆಗೆ ದೂರುಗಳು ಬಂದಿವೆ. ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ ಇಲಾಖೆ ನಗರದ 14 ಸೆಲೂನ್ಗಳಿಗೆ ದಿಢೀರ್ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ. ಸೆಲೂನ್ ಮಾಲೀಕರು ತಮ್ಮ ಕೆಲಸಗಾರರ ಬಗ್ಗೆ ಪೊಲೀಸ್ ದೃಢೀಕರಣ ಪಡೆಯಬೇಕು. ರಿಸೆಪ್ಷನ್, ಪ್ರವೇಶ ಸ್ಥಳಗಳಲ್ಲಿ ಸಿಸಿ ಕೆಮರಾ ಅಳವಡಿಸಬೇಕು. ಎಲ್ಲ ಗ್ರಾಹಕರ ಮಾಹಿತಿ ದಾಖಲಿಸಿಕೊಳ್ಳಬೇಕು. ಸಂಬಂಧಿಸಿದ ಇತರ ಇಲಾಖೆಗಳ ಮಾರ್ಗಸೂಚಿಗಳನ್ನು ಪಾಲಿಸಬೇಕು. ಈ ನಿಯಮ ಮೀರಿದರೆ ಅಂತಹವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.
ರಾಮನಗರ, ಸೆ. 22: ಹೆಚ್. ಗೊಲ್ಲಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಗುರುವಾರ ಬೆಳಿಗ್ಗೆ ನೀರಿನ ತೊಟ್ಟಿಯ ಗೋಡೆ ಕುಸಿದು ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ ಘಟನೆ ನಡೆದಿದೆ. ಮೃತರನ್ನು ರಾಮನಗರದ ಹೊಸೂರು ಗೊಲ್ಲಳ್ಳಿಯ ಕೌಶಿಕ್ ಗೌಡ (12) ಎಂದು ಗುರುತಿಸಲಾಗಿದೆ. ಗುರುವಾರ ಬೆಳಿಗ್ಗೆ ಐದು ಅಡಿ ಎತ್ತರವಿರುವ ನೀರಿನ ತೊಟ್ಟಿಯ ಬಳಿ ಕೌಶಿಕ್ ಮತ್ತು ಚರಣ್ ಇಬ್ಬರು ವಿದ್ಯಾರ್ಥಿಗಳು ಮುಖ ತೊಳೆಯುತ್ತಿದ್ದರು. ಈ ವೇಳೆ ಶಿಥಿಲಗೊಂಡಿದ್ದ ತೊಟ್ಟಿಯ ಗೋಡೆ ವಿದ್ಯಾರ್ಥಿಗಳ ಮೇಲೆ ಉರುಳಿದೆ. ಉರುಳಿದ ಗೋಡೆಯ ಅವಶೇಷಗಳಡಿ ಸಿಲುಕಿ ತೀವ್ರವಾಗಿ ಗಾಯಗೊಂಡಿದ್ದ ಕೌಶಿಕ್ನನ್ನು ಆಸ್ಪತ್ರೆಗೆ ಸಾಗಿಸುವಾಗ ಕೊನೆಯುಸಿರೆಳೆದಿದ್ದಾನೆ.ನೀರಿನ ಪ್ರಮಾಣ ತಡೆಯಲಾಗದೇ ಗೋಡೆ ಕುಸಿದಿದೆ ಎಂದು ಹೇಳಲಾಗಿದೆ.
ಮಂಗಳೂರು, ಸೆ. 21 : ನಗರದ ಕೊಡಿಯಾಲ್ ಬೈಲ್ ನಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ನೂತನವಾಗಿ ನಿರ್ಮಿಸಲಾಗಿರುವ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ಪರಿಶಿಷ್ಟ ಜಾತಿ ಬಾಲಕಿಯರ ವಿದ್ಯಾರ್ಥಿ ನಿಲಯಗಳನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ಉದ್ಘಾಟಿಸಿದರು. ಶಾಸಕರಾದ ಡಿ. ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಿದ್ದರು.ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ. ಖಾದರ್ ಫರೀದ್ ಅವರು ಕಾರ್ಯಕ್ರಮದ ಘನ ಉಪಸ್ಥಿತಿ ವಹಿಸಿದ್ದರು.ಈ ಸಂದರ್ಭದಲ್ಲಿ ಗಣ್ಯರು ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಕುದ್ಮಲ್ ರಂಗ ರಾವ್ ಅವರ ಭಾವಚಿತ್ರಕ್ಕೆ ಪುಪ್ಷಾರ್ಚನೆ ಮಾಡಿದರು. ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ವಿಧಾನ ಪರಿಷತ್ ಶಾಸಕರಾದ ಹರೀಶ್ ಕುಮಾರ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ., ಜಿ.ಪಂ. ಸಿಇಒ ಡಾ. ಆನಂದ್, ಅಧಿಕಾರಿಗಳು ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ಕಾಸರಗೋಡು, ಸೆ .19 : ರಸ್ತೆಯ ಹೊಂಡದಲ್ಲಿ ಸಿಲುಕಿದ ಸ್ಕೂಟರ್ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಪರಿಣಾಮ ಎಂಬಿಬಿಎಸ್ ವಿದ್ಯಾರ್ಥಿನಿ ಸಾವನ್ನಪ್ಪಿದ ಘಟನೆ ಕಾಸರಗೋಡಿನಲ್ಲಿ ನಡೆದಿದೆ. ಮೃತರನ್ನು ಕಣ್ಣೂರು ಚೇಂಬರ್ ಆಫ್ ಕಾಮರ್ಸ್ ನ ಮಾಜಿ ಅಧ್ಯಕ್ಷ, ಕಣ್ಣೂರು ಸೈಂಟ್ ಮೈಕಲ್ ಶಾಲಾ ಸಮೀಪದ ಮಹೇಶ್ಚಂದ್ರ ಬಾಳಿಗಾ ರವರ ಪುತ್ರಿ ಶಿವಾನಿ ಬಾಳಿಗಾ (20) ಎಂದು ಗುರುತಿಸಲಾಗಿದೆ. ರವಿವಾರ ರಾತ್ರಿ ಕಾಸರಗೋಡು ಚಂದ್ರಗಿರಿ ರಸ್ತೆಯ ಪಿಲಿಕುಂಜೆ ಎಂಬಲ್ಲಿ ಅಪಘಾತ ನಡೆದಿತ್ತು. ಸ್ಕೂಟರ್ ನಲ್ಲಿ ತೆರಳುತ್ತಿದ್ದಾಗ ರಸ್ತೆಯ ಹೊಂಡಕ್ಕೆ ಬಿದ್ದ ಪರಿಣಾಮ ರಸ್ತೆಗೆಸೆಯಲ್ಪಟ್ಟ ಶಿವಾನಿ ಗಂಭೀರ ಗಾಯಾಗೊಂಡಿದ್ದು,ಅವರನ್ನು.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ಸಾವನ್ನಪ್ಪಿದ್ದಾರೆ. ಕಾಸರಗೋಡು ಪೊಲೀಸ್ ಸ್ಟೇಷನ್ನಿನಲ್ಲಿಪ್ರಕರಣ ದಾಖಲಾಗಿದೆ.
ಬೆಂಗಳೂರು, ಸೆ. 18 : ಚಲಿಸುತ್ತಿದ್ದ ಕಾರಿನ ಟೈಯರ್ ಸ್ಫೋಟಗೊಂಡು ಕಾರಿನಲ್ಲಿದ್ದ ಮೂವರು ಸಾವನ್ನಪ್ಪಿದ ಘಟನೆ ಉತ್ತರ ತಾಲೂಕಿನ ಅಂಚೆಪಾಳ್ಯ ಬಳಿ ನಡೆದಿದೆ. ಮೃತರನ್ನು ಅಗಸ್ಟಿನ್, ದಾರಾರೆಡ್ಡಿ ಎಂದು ಗುರುತಿಸಲಾಗಿದೆ. ಮತ್ತೊಬ್ಬನ ಗುರುತು ಪತ್ತೆಯಾಗಿಲ್ಲ. ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅವಘಡ ಸಂಭವಿಸಿದ್ದು,ತುಮಕೂರು ಮಾರ್ಗವಾಗಿ ಬೆಂಗಳೂರಿಗೆ ವೇಗವಾಗಿ ಚಲಿಸುತ್ತಿದ್ದ ವೇಳೆ ಕಾರಿನ ಚಕ್ರ ಬ್ಲಾಸ್ಟ್ ಆದ ಪರಿಣಾಮ ಅಪಘಾತ ಸಂಭವಿಸಿ ಕಾರು ನಜ್ಜುಗುಜ್ಜಾಗಿದೆ. ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು, ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಿಯೊ ಡಿ ಜನೈರೊ, ಸೆ 17:ವಿಮಾನವೊಂದು ಪತನಗೊಂಡು 14 ಜನ ಸಾವನಪ್ಪಿದ ಘಟನೆ ಬ್ರೆಜಿಲ್ನ ಬಾರ್ಸಿಲೋಸ್ನಲ್ಲಿ ನಡೆದಿದೆ. ಹವಮಾನ ವೈಪರೀತ್ಯದಿಂದಾಗಿ ಲಘು ಪ್ರಯಾಣಿಕರ ವಿಮಾನ ಅಪಘಾತಕ್ಕಿಡಾಗಿದೆ ಎಂದು ಬ್ರೆಜಿಲ್ನ ಪೊಲೀಸರು ತಿಳಿಸಿದ್ದಾರೆ ಎಂದು ವರದಿಯಾಗಿದೆ.ಮೃತರಲ್ಲಿ 12 ಮಂದಿ ಪ್ರಯಾಣಿಕರು ಹಾಗೂ ಇಬ್ಬರು ಸಿಬ್ಬಂದಿ ಎಂದು ತಿಳಿದು ಬಂದಿದೆ.
ಮಂಗಳೂರು, ಸೆ. 16 : ಓಂ ಸಾಯಿ ಪ್ರೊಡಕ್ಷನ್ ಬ್ಯಾನರಿನಡಿಯಲ್ಲಿ ನಿರ್ಮಾಣವಾದ ನಿಗೂಢ ಗುರುತು’ ಕನ್ನಡ ಚಲನಚಿತ್ರ ಸೆ. 15 ರಂದು ಭಾರತ್ ಸಿನೆಮಾಸ್ ಥಿಯೇಟರ್ ನಲ್ಲಿ ಬಿಡುಗಡೆಗೊಂಡಿದೆ. ಉದ್ಯವರ ಮಾಡ ಶ್ರೀ ಅರಸು ಮಂಜೀಷ್ಕಾರ್ ದೈವಸ್ಥಾನದ ದೈವದ ಪಾತ್ರಿ ಶ್ರೀ ತಿಮಿರಿ ಬೆಲ್ಚಪ್ಪಾಡರವರು ಇತರ ಗಣ್ಯರೊಂದಿಗೆ ಸೇರಿ ದೀಪ ಬೆಳಗಿಸಿದರು.ನಂತರ ಚಿತ್ರಕ್ಕೆ ಶುಭಹಾರೈಸಿದರು. ಈ ಸಂದರ್ಭದಲ್ಲಿ ರಂಗ ಕಲಾವಿದೆ ರೂಪಾಶ್ರೀ ವರ್ಕಾಡಿ,ಕಾಂತಾರ ಚಿತದಲ್ಲಿ ನಟಿಸಿದ ನವೀನ್ ಬೊಂದೇಲ್, ಚಿತ್ರದ ನಿರ್ಮಾಪಕಿ ಪ್ರಿಯಾ ಚಿದಾನಂದ್ ಪೆರ್ಲ, ಸಹನಿರ್ಮಾಪಕರಾದ ಚಿದಾನಂದ್ ಪೆರ್ಲ, ವಿಶಾಲ ಕರ್ನಾಟಕದ ಹಂಚಿಕೆದಾರ ತುಕಾರಾಮ ಬಾಯಾರು, ಪಿ.ಆರ್.ಓ ರತನ್ ಕುಮಾರ್ ಹೊಸಂಗಡಿ ಮತ್ತಿತ್ತರು ಉಪಸ್ಥಿತರಿದ್ದರು. ಅರ್ಜುನ್,ರಕ್ಷಿತ್,ರಂಜಿತ್,ಸಂತೋಷ್ ಕುಮಾರ್.ವಸಂತ್.ವಸಂತ್ ಲ್ಯಾನ್ಸಿ ಶೋಭ ನಾಯರ್. ಸುಧಾಕರ್.ರಘುನಂದನ್,ಹೇಮಂತ್,ಪ್ರಶಾಂತ್ ಕೆ.ಪಿ..ಕಾಮಾಕ್ಷೀ.ಚೈತ್ರ ಸೇರಿದಂತೆ ಇತರರು ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ಸಸ್ಪೆನ್ಸ್ ಕಥೆಯನ್ನೊಳಗೊಂಡಿದೆ.
ವಿಟ್ಲ, ಸೆ. 14 : ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಯುವತಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ವಿಟ್ಲದ ಪೆರುವಾಯಿಯಲ್ಲಿ ನಡೆದಿದೆ. ಮೃತರನ್ನು ಪೆರುವಾಯಿ ನಿವಾಸಿ ಆಶಾ (25) ಎಂದು ಗುರುತಿಸಲಾಗಿದೆ. ಕಳೆದ ಎರಡು ದಿನಗಳಿಂದ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಯುವತಿಯನ್ನು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಯುವತಿ ಮೃತಪಟ್ಟಿದ್ದಾರೆ.
ಬಂಟ್ವಾಳ, ಸೆ. 10 : ಕರ್ನಾಟಕ ಸಣ್ಣ ನೀರಾವರಿ ಸಚಿವ ಎನ್.ಎಸ್.ಭೋಸರಾಜು ಅವರು ಸೆ. 09, ಶನಿವಾರ ಕೇಂದ್ರದ ಮಾಜಿ ಸಚಿವ ಬಿ ಜನಾರ್ದನ ಪೂಜಾರಿ ಅವರನ್ನು ಭೇಟಿ ಮಾಡಿದರು ಹಾಗೂ ಆಶೀರ್ವಾದ ಪಡೆದರು. ಮತ್ತು ಅವರ ಆರೋಗ್ಯವನ್ನು ವಿಚಾರಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಎನ್.ಎಸ್.ಭೋಸರಾಜು ಅವರು, ಜನಾರ್ದನ ಪೂಜಾರಿ ಅವರು ನಮಗೆಲ್ಲರಿಗೂ ಮಾರ್ಗದರ್ಶಿ. ಪ್ರಾಮಾಣಿಕವಾಗಿ ಹಾಗೂ ಕಠಿಣ ಪರಿಶ್ರಮದಿಂದ ಪಕ್ಷವನ್ನು ಒಗ್ಗೂಡಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದರು.












