Subscribe to Updates
Get the latest creative news from FooBar about art, design and business.
Author: admin
ತೆಲಂಗಾಣ, ಡಿ 05 : ಭಾರತೀಯ ವಾಯುಪಡೆಯ ಲಘು ವಿಮಾನವೊಂದು ಪತನಗೊಂಡು ಇಬ್ಬರು ಪೈಲಟ್ ಗಳು ಸಾವನ್ನಪ್ಪಿರುವ ಘಟನೆ ತೆಲಂಗಾಣದ ಮೇದಕ್ ಜಿಲ್ಲೆಯ ತೂಪ್ರಾನ್ ಬಳಿಯ ರಾವೆಲ್ಲಿಎಂಬಲ್ಲಿ ಸೋಮವಾರ ನಡೆದಿದೆ. ವಿಮಾನ ಪತನಗೊಂಡಾಗ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ವಿಮಾನ ಸಂಪೂರ್ಣ ಸುಟ್ಟು ಬೂದಿಯಾಗಿದೆ. ವಿಮಾನ ಪತನಕ್ಕೆ ತಾಂತ್ರಿಕ ವೈಫಲ್ಯ ಕಾರಣ ಎಂದು ಪ್ರಾಥಮಿಕ ಮೂಲಗಳು ತಿಳಿಸಿವೆ. ಈ ವಿಮಾನ ವಾಯುಪಡೆಯ ತರಬೇತಿ ವಿಮಾನವಾಗಿದ್ದು, ಅದರಲ್ಲಿದ್ದ ಓರ್ವ ಪೈಲಟ್ ಬೋಧಕನಾಗಿದ್ದು ಇನ್ನೋರ್ವ ತರಬೇತಿ ಪಡೆಯುತ್ತಿದ್ದ ಕೆಡೆಟ್ ಆಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಗ್ನಿ ಶಾಮಕ ದಳ ಮತ್ತು ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ.
ಪುತ್ತೂರು, ಡಿ. 04 : ಮಾಡನ್ನೂರು ಗ್ರಾಮದ ಕಾವು ಬಂಗ್ಲೆ ಗುಡ್ಡೆ ನಿವಾಸಿ, ಅರಿಯಡ್ಕ ಗ್ರಾಮ ಪಂಚಾಯತಿನ ಕಾಂಗ್ರೆಸ್ ಬೆಂಬಲಿತ ಸದಸ್ಯರೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಮೃತರನ್ನು ಶಂಕರ ಮಾಡನ್ನೂರು (40 ) ಎಂದು ಗುರುತಿಸಲಾಗಿದೆ. ಸಾಲಬಾಧೆಯಿಂದಾಗಿ ಜೀವನದಲ್ಲಿ ಜಿಗುಪ್ಸೆಗೊಂಡು, ಡಿ.3ರಂದು ಮನೆಯವರು ಮಲಗಿದ್ದಾಗ ಮನೆಯ ಒಳಗಡೆಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಸಂಪ್ಯ ಠಾಣೆಯಲ್ಲಿ ಪ್ರ ಕರಣ ದಾಖಲಾಗಿದೆ.
ಸಂಪಾಜೆ, ಡಿ. 3 : ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸಂಪಾಜೆ ಗ್ರಾಮದ ಕಲ್ಲುಗುಂಡಿಯಲ್ಲಿ ಶನಿವಾರ ನಡೆದಿದೆ. ಮೃತರನ್ನು ಸಂಪಾಜೆ ಗ್ರಾಮದ ಎಡ್ವಾಣೆ ತಿಮ್ಮಪ್ಪ ಪೂಜಾರಿ (65) ಎಂದು ಗುರುತಿಸಲಾಗಿದೆ. ತಿಮ್ಮಪ್ಪ ಪೂಜಾರಿ ಅವರು ತಮ್ಮ ಮನೆಗೆ ನಡೆದುಕೊಂಡು ಹೋಗುವ ದಾರಿಯ ಮದ್ಯೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ಲಂಡನ್ , ಡಿ 02: ಕಳೆದ ತಿಂಗಳು ಯುಕೆಯಲ್ಲಿ ನಾಪತ್ತೆಯಾಗಿದ್ದ ಭಾರತೀಯ ವಿದ್ಯಾರ್ಥಿ ಈಗ ಲಂಡನ್ನ ಥೇಮ್ಸ್ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೃತರನ್ನು ಮಿತ್ಕುಮಾರ್ ಪಟೇಲ್(23) ಎಂದು ಗುರುತಿಸಲಾಗಿದೆ. ಮಿತ್ಕುಮಾರ್ ಪಟೇಲ್ ಉನ್ನತ ವ್ಯಾಸಂಗಕ್ಕಾಗಿ ಸೆಪ್ಟೆಂಬರ್ನಲ್ಲಿ ಯುಕೆಗೆ ಆಗಮಿಸಿದ್ದರು. ನವೆಂಬರ್ 17 ರಂದು ನಾಪತ್ತೆಯಾಗಿದ್ದರು. ಕೊನೆಗೆ ಅವರ ಶವ ಲಂಡನ್ನ ಥೇಮ್ಸ್ ನದಿಯಲ್ಲಿ ಪತ್ತೆಯಾಗಿದೆ. ನವೆಂಬರ್ 21 ರಂದು ಪೂರ್ವ ಲಂಡನ್ನ ಕ್ಯಾನರಿ ವಾರ್ಫ್ ಪ್ರದೇಶದ ಬಳಿ ಥೇಮ್ಸ್ ನದಿಯಲ್ಲಿ ಅವರ ದೇಹವನ್ನು ಮೆಟ್ರೋಪಾಲಿಟನ್ ಪೊಲೀಸರು ಪತ್ತೆ ಹಚ್ಚಿದರು ಅಲ್ಲದೇ ಈ ಸಾವು ಅನುಮಾನಾಸ್ಪದ ಎಂದು ಮೆಟ್ರೋಪಾಲಿಟನ್ ಪೊಲೀಸರು ತಿಳಿಸಿದ್ದಾರೆ.
ಮಂಗಳೂರು, ಡಿ. 01 : ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ವೈರಲ್ ಜ್ವರದ ಹಾವಳಿ ಹೆಚ್ಚಾಗತೊಡಗಿದ್ದು, ಜನಸಾಮಾನ್ಯರನ್ನು ಕಂಗೆಡಿಸಿವೆ. ಕಳೆದ ಕೆಲವು ದಿನಗಳಿಂದ ಹವಾಮಾನದಲ್ಲಿ ಬದಲಾವಣೆಯಾಗಿದ್ದು, ಈ ರೀತಿಯ ವಾತಾವರಣವು ವೈರಲ್ ಜ್ವರ ಪ್ರಕರಣಗಳ ಹೆಚ್ಚಳಕ್ಕೆ ಕಾರಣವೆಂದು ಗುರುತಿಸಲಾಗಿದೆ. ಇದು ನಗರದ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಚಿಕಿತ್ಸಾಲಯಗಳಿಗೆ ಭೇಟಿ ನೀಡುವ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ. ಹವಾಮಾನದ ಬದಲಾವಣೆಯಿಂದ ಜನಸಾಮಾನ್ಯರ ಆರೋಗ್ಯದಲ್ಲಿ ಏರುಪೇರುಗಳಾಗಲಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಬ್ರಹ್ಮಾವರ,ನ. 30 : ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬ್ರಹ್ಮಾವರದ ಧರ್ಮವರಂ ಬಳಿ ಬುಧವಾರ ನಡೆದಿದೆ ಮೃತರನ್ನು ಬ್ರಹ್ಮಾವರದ ಹಂದಾಡಿ ಗ್ರಾಮದ ಪ್ರೀತಂ ಡಿಸಿಲ್ವಾ (31) ಎಂದು ಗುರುತಿಸಲಾಗಿದೆ. ಪ್ರೀತಂ ಬೈಕ್ನಲ್ಲಿ ಸಂಚರಿಸುತ್ತಿದ್ದಾಗ ವೇಗವಾಗಿ ಬಂದ ಎಕ್ಸ್ಪ್ರೆಸ್ ಬಸ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಈ ಪರಿಣಾಮ ಪ್ರೀತಂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ಉತ್ತರಕಾಶಿ, ನ. 29 : ಉತ್ತರಾಖಂಡದ ಸಿಲ್ಕ್ಯಾರಾ ಸುರಂಗದ ಒಳಗೆ ಕಳೆದ 17 ದಿನಗಳಿಂದ ಸಿಲುಕಿದ್ದ 41 ಕಾರ್ಮಿಕರ ರಕ್ಷಣಾ ಕಾರ್ಯ ಪೂರ್ಣಗೊಂಡಿದೆ. ಸಿಲ್ಕ್ಯಾರಾ ಕೊಳವೆಯೊಳಗೆ ಸ್ಟ್ರೆಚರ್ ಬಳಸಿ ರಾತ್ರಿ 8ಕ್ಕೆ ಮೊದಲ ಕಾರ್ಮಿಕನನ್ನು ಸುರಕ್ಷಿತವಾಗಿ ಹೊರತರುವಲ್ಲಿ ಕೇಂದ್ರ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ತಂಡ ಸಫಲವಾಯಿತು. ನಂತರ ಒಬ್ಬರ ಹಿಂದೊಬ್ಬರಂತೆ ಕಾರ್ಮಿಕರು ಹೊರಬಂದರು. ಸ್ಥಳಕ್ಕೆ ಭೇಟಿ ನೀಡಿದ ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಕಾರ್ಮಿಕರ ಆರೋಗ್ಯ ವಿಚಾರಿಸಿ ಸಂಭ್ರಮಿಸಿದರು. ಸುರಕ್ಷಿತವಾಗಿ ಹೊರ ಬಂದ ಕಾರ್ಮಿಕರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಾಯಿತು. ಸುರಂಗದೊಳಗೆ ಹೋದ ಅಂಬುಲೆನ್ಸ್ಗಳು ಕೊಳವೆಯಿಂದ ಹೊರಬರುತ್ತಿದ್ದ ಕಾರ್ಮಿಕರನ್ನು ಒಬ್ಬೊಬ್ಬರನ್ನಾಗಿ ಹೊತ್ತೊಯ್ದವು.
ಮಂಗಳೂರು, ನ. 28 : ನಗರದ ಹೊರವಲಯದ ವಾಮಂಜೂರು ಸಮೀಪದ ಕೆತ್ತಿಕಲ್ನಲ್ಲಿ ಆ ಊರಿಗೆ ಹೆಸರು ಬರಲು ಕಾರಣ ಎನ್ನಲಾದ ಕಲ್ಲೊಂದು ಪತ್ತೆಯಾಗಿದೆ. ಹಲವು ವರ್ಷಗಳಿಂದ ಗಿಡಗಂಟಿಗಳ ಎಡೆಯಲ್ಲಿ ಹುದುಗಿದ್ದ ಈ ಕಲ್ಲು ಸೋಮವಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಸ್ತೆ ವಿಸ್ತರಣೆ ಕಾಮಗಾರಿಗಾಗಿ ಗಿಡಗಂಟಿಗಳನ್ನು ಸ್ವಚ್ಛಗೊಳಿಸಿದಾಗ ಪತ್ತೆಯಾಗಿದೆ. ಕಲ್ಲು ಪತ್ತೆಯಾದ ವಿಷಯ ಸ್ಥಳೀಯರಿಗೆ ತಿಳಿಯುತ್ತಿದ್ದಂತೆ ಅವರು ಅಲ್ಲಿಗೆ ಹೋಗಿ ಕಲ್ಲನ್ನು ತಕ್ಷಣ ತೆರವು ಮಾಡಬಾರದು, ಈ ಕಲ್ಲಿನಲ್ಲಿ ನೂರಾರು ವರ್ಷಗಳ ಇತಿಹಾಸವಿರುವ ಮಾಹಿತಿ ಲಭಿಸಬಹುದು ಎಂಬ ಕಾರಣಕ್ಕೆ ಕಲ್ಲನ್ನು ಅದನ್ನು ಗೌರವಯುತವಾಗಿ ಸ್ಟಳಾಂತರ ಮಾಡಬೇಕು ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಲ್ಲಿ ಸ್ಥಳೀಯರು ಮನವಿ ಮಾಡಿದರು. ಈ ಕಲ್ಲನ್ನು ಗೌರವಯುತವಾಗಿ ಬೇರೆ ಕಡೆ ಸ್ಥಳಾಂತರಿಸುವಂತೆ ಸ್ಥಳೀಯರು ಕೇಳಿಕೊಂಡರು. ಮನವಿಗೆ ಸಮ್ಮತಿಸಿದ ಎನ್ಹೆಚ್ಎಐ ಅಧಿಕಾರಿಗಳು ಕ್ರೇನ್ ಮತ್ತು ಹಗ್ಗ ಬಳಸಿ ಕಲ್ಲು ಸ್ಥಳಾಂತರಿಸುವುದಾಗಿ ಸ್ಥಳೀಯರಿಗೆ ತಿಳಿಸಿದರು.
ಚಿಕ್ಕಮಗಳೂರು, ನ. 27: ವಿದ್ಯುತ್ ತಂತಿಗೆ ಅಲ್ಯೂಮಿನಿಯಂ ಏಣಿ ತಗುಲಿ ಯುವಕ ಮೃತಪಟ್ಟಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಪಟ್ಟಣಗೆರೆ ಗ್ರಾಮದಲ್ಲಿ ನಡೆದಿದೆ.ಅಭಿಷೇಕ್ (27) ವಿದ್ಯುತ್ ತಂತಿಗೆ ಏಣಿ ತಗುಲಿ ಮೃತಪಟ್ಟವರು. ಮೃತ ಅಭಿಷೇಕ್ ಭಾನುವಾರ ತೋಟದಲ್ಲಿ ತೋಟದಲ್ಲಿ ತೆಂಗಿನಕಾಯಿ ಕೀಳಲು ಒಂದು ಮರದಿಂದ ಮತ್ತೊಂದು ತೆಂಗಿನ ಮರದ ಬಳಿ ಹೋಗುವಾಗ ಅಲ್ಯುಮಿನಿಯಂ ಏಣಿಯನ್ನ ಎತ್ತಿಕೊಂಡು ಹೋಗುವಾಗ ಪ್ರೈಮರಿ ಲೈನ್ (11 ಸಾವಿರ ಕಿಲೋ ವ್ಯಾಟ್) ವಿದ್ಯುತ್ ತಂತಿಗೆ ಏಣಿ ತಗುಲಿ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ. ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತುಮಕೂರು ನ. 26 : ಬೆಂಗಳೂರು ಕಂಬಳ ನೋಡಿ ವಾಪಸಾಗುವಾಗ ಕಾರಿಗೆ ಲಾರಿ ಢಿಕ್ಕಿ ಹೊಡೆದು ಇಬ್ಬರು ಸಾವನಪ್ಪಿದ ಘಟನೆ ಕುಣಿಗಲ್ ತಾಲೂಕಿನ ಚಿಗಣಿಪಾಳ್ಯ ಬಳಿ ನಡೆದಿದೆ. ಬಜಪೆ ಮೂಲದ ಕಿಶಾನ್ ಶೆಟ್ಟಿ( 20 ) ದಕ್ಷಿಣ ಕನ್ನಡ ಜಿಲ್ಲೆ ಭಟ್ಟರ ತೋಟ ಗ್ರಾಮದ ಫಿಲೀಪ್ ನೇರಿ ಲೋಬೋ (32) ಅಪಘಾತದಲ್ಲಿ ಸಾವನಪ್ಪಿದವರು. ನಿತೀಶ್ ಭಂಡಾರಿ, ಪ್ರೀತಿ ಲೋಬೋ, ಹರೀಶ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರಿನಲ್ಲಿ ಶನಿವಾರ ನಡೆಯುತ್ತಿದ್ದ ಕಂಬಳವನ್ನು ನೋಡಿಕೊಂಡು ತಮ್ಮ ಊರಿಗೆ ವಾಪಸ್ ಆಗುವ ವೇಳೆ ಕುಣಿಗಲ್ ಕಡೆಯಿಂದ ತುಮಕೂರು ಕಡೆಗೆ ಹೊಗುತ್ತಿದ್ದ ಲಾರಿ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.