Subscribe to Updates
Get the latest creative news from FooBar about art, design and business.
Author: admin
ನೇಪಾಳ, ನ. 4 : ನೇಪಾಳದಲ್ಲಿ ಶುಕ್ರವಾರ ರಾತ್ರಿ 6.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ರಾಷ್ಟ್ರೀಯ ರಾಜಧಾನಿ ಪ್ರದೇಶ ಸೇರಿದಂತೆ ಉತ್ತರ ಭಾರತದ ಹಲವು ಭಾಗಗಳಲ್ಲಿ ಕಂಪನದ ಅನುಭವವಾಗಿದೆ. ಸುದ್ದಿ ಸಂಸ್ಥೆ ರಾಯಿಟರ್ಸ್ ಪ್ರಕಾರ, ಶುಕ್ರವಾರ ಮಧ್ಯರಾತ್ರಿಯ ಮೊದಲು ವಾಯುವ್ಯ ನೇಪಾಳದ ಜಿಲ್ಲೆಗಳಲ್ಲಿ ಪ್ರಬಲ ಭೂಕಂಪ ಸಂಭವಿಸಿ ಕನಿಷ್ಠ 128 ಜನರು ಮೃತಪಟ್ಟಿದ್ದಾರೆ ಮತ್ತು ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಭೂಕಂಪದ ಪರಿಣಾಮ ಹಲವು ಕಟ್ಟಡಗಳು ಕುಸಿದು ಬಿದ್ದಿದ್ದು, ಜನ ಅತ್ತಿತ್ತ ನೋಡಿ ತನ್ನವರನ್ನು ಹುಡುಕುತ್ತಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಭೂಕಂಪದಿಂದ ಸಾವನಪ್ಪಿದವರ ಸಂಖ್ಯೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಚಿಕ್ಕಬಳ್ಳಾಪುರ, ನ.03: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸೊಳ್ಳೆಗಳಿಂದ ಹರಡುವ ಮಾರಕ ಝಿಕಾ ವೈರಸ್ ಪತ್ತೆಯಾದ ಕಾರಣ ಕರ್ನಾಟಕ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದೆ. ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಹೋಬಳಿಯ ತಲಕಾಯಲಬೆಟ್ಟ ವ್ಯಾಪ್ತಿಯಲ್ಲಿ ಝೀಕಾ ವೈರಸ್ ಪತ್ತೆಯಾಗಿದೆ. ಹಾಗೆನೇ ರಾಜ್ಯದ 68 ವಿವಿಧ ಸ್ಥಳಗಳಲ್ಲಿ ಸೊಳ್ಳೆಗಳ ದೇಹದಲ್ಲಿ ಝಿಕಾ ವೈರಸ್ ಇರುವುದನ್ನು ಪರೀಕ್ಷಿಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಅಂತೆಯೇ ಚಿಕ್ಕಬಳ್ಳಾಪುರ ಜಿಲ್ಲೆಯ ಆರು ಸ್ಥಳಗಳಿಂದ ಮಾದರಿಗಳನ್ನು ತೆಗೆದುಕೊಳ್ಳಲಾಗಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ಸೊಳ್ಳೆಗಳನ್ನು ಹಿಡಿದು ಪರೀಕ್ಷೆಗೆ ಒಳಪಡಿಸಿದಾಗ ಝೀಕಾ ವೈರಸ್ ಪತ್ತೆಯಾಗಿದೆ. ಆದರೆ ಜನರಿಗೆ ಹರಡಿಲ್ಲ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ಝಿಕಾ ವೈರಸ್ ಸೊಳ್ಳೆಯಿಂದ ಹರಡುವ ವೈರಲ್ ಸೋಂಕು, ಇದರ ರೋಗದ ಲಕ್ಷಣಗಳು ಜ್ವರ, ತಲೆನೋವು, ಕೀಲು ನೋವು, ಕೆಂಪು ಕಣ್ಣುಗಳು ಮತ್ತು ಸ್ನಾಯು ನೋವು.
ಉಡುಪಿ,ನ. 3 : ಕಂಟೈನರ್ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೊಬ್ಬರು ಸಾವನ್ನಪ್ಪಿದ ಘಟನೆ ಸಂತೆಕಟ್ಟೆ ಕ್ಲಾಸಿಕ್ ಸರ್ವಿಸ್ ಸೆಂಟರ್ ಬಳಿ ನ.1ರಂದು ನಡೆದಿದೆ. ಮೃತರನ್ನು ಸಂಜೀವ (61) ಎಂದು ಗುರುತಿಸಲಾಗಿದೆ. ಹೆದ್ದಾರಿ ಸಮೀಪದ ರಸ್ತೆಯ ಬದಿಯಲ್ಲಿರುವ ಮಣ್ಣು ರಸ್ತೆಯಲ್ಲಿ ಸಂಜೀವ ಅವರು ನಡೆದುಕೊಂಡು ಹೋಗುತ್ತಿದ್ದಾಗ ಉಡುಪಿ ಕಡೆಯಿಂದ ಸಂತೆಕಟ್ಟೆ ಕಡೆಗೆ ಹೋಗುತ್ತಿದ್ದ ಕಂಟೈನರ್ ಢಿಕ್ಕಿ ಹೊಡೆದಿದ್ದು, ಇದರಿಂದ ಗಂಭೀರವಾಗಿ ಗಾಯಗೊಂಡ ಸಂಜೀವ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಉಡುಪಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಸೇಲಂ, ಅ. 27 : ಸಂಕೀರ್ಣ ವಿಜ್ಞಾನ ವಿಷಯಗಳ ಕುರಿತು ಜನಸಾಮಾನ್ಯರು ಮತ್ತು ದಿಗ್ಗಜರೊಂದಿಗೆ ಸರಳ ಹಾಗೂ ಸಲೀಸಾಗಿ ಮಾತನಾಡುತ್ತಿದ್ದ ಖ್ಯಾತ ಜನತಾ ವಿಜ್ಞಾನಿ ಡಾ.ವಿ.ಎಸ್.ವೆಂಕಟವರಧನ್(85) ತಮಿಳುನಾಡಿನ ಸೇಲಂನಲ್ಲಿ ನಿಧನರಾಗಿದ್ದಾರೆ. ಜಿಯೋಫಿಸಿಕ್ಸ್, ಬಾಹ್ಯಾಕಾಶ ವಿಜ್ಞಾನ ಮತ್ತು ಖಗೋಳ ಭೌತಶಾಸ್ತ್ರದಲ್ಲಿ ಐವತ್ತಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಬರೆದಿರುವ ಅವರು ಪ್ರಮುಖ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳಲ್ಲಿ ವಿಜ್ಞಾನದ ವಿವಿಧ ಅಂಶಗಳ ಕುರಿತು ಸಾವಿರಕ್ಕೂ ಹೆಚ್ಚು ಜನಪ್ರಿಯ ಲೇಖನಗಳನ್ನು ಬರೆದಿದ್ದರು. ಮೃತರು ಪತ್ನಿ ಶಕುಂತಲಾ, ಪುತ್ರಿ ಅರುಣಾ ಹಾಗೂ ಪುತ್ರ ಸುಂದರ್ ಅವರನ್ನು ಅಗಲಿದ್ದಾರೆ.
ಮಂಗಳೂರು,ಅ. 25: ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ಪೂಜೆಗೊಂಡ ನವದುರ್ಗೆಯರು, ಗಣಪತಿ ಮತ್ತು ಶ್ರೀ ಶಾರದಾ ದೇವಿ ವಿಗ್ರಹಗಳ ವೈಭವದ ಮಂಗಳೂರು ದಸರಾ ಮೆರವಣಿಗೆ ಶುಕ್ರವಾರ ನಗರದಲ್ಲಿ ನಡೆಯಿತು. ದಸರಾ ಮಹೋತ್ಸವದ ವೈಭವದ ಶೋಭಾಯಾತ್ರೆಯಲ್ಲಿ ಐವತ್ತಕ್ಕೂ ಅಧಿಕ ಟ್ಯಾಬ್ಲೋಗಳು, ಹುಲಿ ವೇಷದ ಟ್ರಕ್ಗಳು, ಸಾಲು ಸಾಲು ಬಣ್ಣದ ಕೊಡೆಗಳು, ಕೇರಳದ ಚೆಂಡೆ, ನಾಸಿಕ್ ಬ್ಯಾಂಡ್, ಭಜನಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಮೆರವಣಿಗೆಯು ಶ್ರೀಕ್ಷೇತ್ರದಿಂದ ಸುಮಾರು 9 ಕಿ.ಮೀ. ದೂರ ಸಂಚರಿಸಿ ಬುಧವಾರ ಮುಂಜಾನೆ ವೇಳೆಗೆ ಶ್ರೀಕ್ಷೇತ್ರಕ್ಕೆ ಮರಳಲಿತು. ಬಳಿಕ ಮೃಣ್ಮಯ ಮೂರ್ತಿಗಳು ದೇವಾಲಯದ ಕಲ್ಯಾಣಿಯಲ್ಲಿ ಜಲಸ್ತಂಭನಗೊಂಡು ಮಂಗಳೂರು ದಸರಾ ಸಂಪನ್ನಗೊಂಡಿತು.
ಭಟ್ಕಳ, ಅ 24 : ಉತ್ತರ ಕನ್ನಡ ಜಿಲ್ಲೆಯಲ್ಲಿ ಡೆಂಗ್ಯೂ ಜ್ವರಕ್ಕೆ ಯುವಕನೋರ್ವ ಬಲಿಯಾಗಿದ್ದಾನೆ. ಮೃತರನ್ನು ತಲಗೋಡ್ ನಿವಾಸಿ ಪ್ರಜ್ವಲ್ ಖಾರ್ವಿ (24) ಎಂದು ಗುರುತಿಸಲಾಗಿದೆ. ಭಟ್ಕಳದ ಬಂದರಿನಲ್ಲಿ ಮೀನುಗಾರಿಕೆ ವೃತ್ತಿ ಮಾಡುತ್ತಿದ್ದ ಪ್ರಜ್ವಲ್ ಕಳೆದ ಮೂರು ನಾಲ್ಕು ದಿನದಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ,ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರಜ್ವಲ್ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಉಡುಪಿ, ಅ.23: ನದಿಗೆ ಸ್ನಾನಕ್ಕೆ ಹೋದ ಇಬ್ಬರು ನೀರು ಪಾಲಾದ ಘಟನೆ ಹೆಬ್ರಿ ಸಮೀಪದ ಕಬ್ಬಿನಾಲೆ ಮತ್ತಾವು ಎಂಬಲ್ಲಿ ನಡೆದಿದೆ. ಮೃತರನ್ನು ಕರ್ಜೆ ನಿವಾಸಿ ಉಮೇಶ್ ಶೆಟ್ಟಿ (48) ಹಾಗೂ ಇಂಜಿನಿಯರಿಂಗ್ ವಿದ್ಯಾರ್ಥಿ ಚಾರ ಹುರ್ತುರ್ಕೆ ನಿವಾಸಿ ಪ್ರಸ್ತುತ್ ಹೆಗ್ಡೆ (21) ಎಂದು ಗುರುತಿಸಲಾಗಿದೆ. ಶನಿವಾರ ಸಂಜೆ 3 ಗಂಟೆಗೆ ಸ್ನಾನಕ್ಕೆ ಹೋದವರು ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು, ಅ. 22 : ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇ 3.75 ರಷ್ಟು ಹೆಚ್ಚಿಸಿ ಜುಲೈ 1 ರಿಂದ ಜಾರಿಗೆ ಬರುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಶೇ 38.75ಗೆ ಏರಿಕೆಯಾಗಿದೆ.UGC/ AICTE/ ICAR ವೇತನ ಶ್ರೇಣಿಗಳ ಬೋಧಕ ಸಿಬ್ಬಂದಿ ಹಾಗೂ NJPC ವೇತನ ಶ್ರೇಣಿಯ ನ್ಯಾಯಾಂಗ ಅಧಿಕಾರಿಗಳ ತುಟ್ಟಿಭತ್ಯೆಯನ್ಬು ಶೇ. 4 ರಷ್ಟು ಹೆಚ್ಚಿಸಿ (ಶೇ 46 ಕ್ಕೆ ಪರಿಷ್ಕರಿಸಿ) ಸರ್ಕಾರ ಆದೇಶ ಹೊರಡಿಸಿದೆ. ಇದರಿಂದ ಸರ್ಕಾರಕ್ಕೆ ವಾರ್ಷಿಕ 1109 ಕೋಟಿ ಹೆಚ್ಚುವರಿ ವೆಚ್ಚವಾಗಲಿದೆ.
ವಿಟ್ಲ, ಅ. 21 : ನೇಣು ಬಿಗಿದು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಪುಣಚದಲ್ಲಿ ನಡೆದಿದೆ. ಪುಣಚದ ಚೆಕ್ಕುತ್ತಿ ನಿವಾಸಿ ಶ್ರೀಕೃಷ್ಣ (26) ಮೃತ ಪಟ್ಟ ಯುವಕ. ಅವಿವಾಹಿತನಾಗಿದ್ದ ಯುವಕ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದರು ಕೃತ್ಯಕ್ಕೆ ಕಾರಣವೇನೆಂದು ತಿಳಿದು ಬಂದಿಲ್ಲ ಎಂದು ಹೇಳಲಾಗಿದೆ. ವಿಟ್ಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಬಂಟ್ವಾಳ,ಅ. 20 : ಪ್ರೇಮ ವೈಫಲ್ಯ ದಿಂದ ಮನನೊಂದ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳ ಕಾಮಾಜೆ ಎಂಬಲ್ಲಿ ನಡೆದಿದೆ. ಕಡೇಶಿವಾಲಯ ಗ್ರಾಮದ ನೆಲ್ಲಿ ಗುಡ್ಡೆ ನಿವಾಸಿ ಸಚಿನ್ (24) ಆತ್ಮಹತ್ಯೆ ಮಾಡಿಕೊಂಡ ಯುವಕ. ಸಚಿನ್ ಇಲೆಕ್ಟ್ರೀಷಿಯನ್ ಆಗಿ ಕೆಲಸ ಮಾಡುತ್ತಿದ್ದ. ಅ.18 ರಂದು ಕೆಲಸಕ್ಕೆ ಹೋದವನು ರಾತ್ರಿಯಾದರೂ ಮನೆಗೆ ಬರದ ಹಿನ್ನೆಲೆಯಲ್ಲಿ ಈತನನ್ನು ಹುಡುಕಲು ಶುರು ಮಾಡಿದ್ದರು. ಪೋನ್ ಮಾಡಿದಾಗ ಪೋನ್ ರಿಂಗು ಕೇಳುತ್ತಿದ್ದ ಜಾಗಕ್ಕೆ ಹೋಗಿ ನೋಡಿದಾಗ ಆತ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಆತ್ಮಹತ್ಯೆ ಮಾಡುವ ಮೊದಲು ಈತ ಚೀಟಿಯನ್ನು ಬರೆದು ಕಿಸೆಯಲ್ಲಿಟ್ಟಿದ್ದಾನೆ ಎನ್ನಲಾಗಿದೆ. ನಗರ ಠಾಣಾ ಇನ್ಸ್ ಪೆಕ್ಟರ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.












